ಸೈಕಲ್ ಜಾಥಾದ ಮೂಲಕ ‘ಬೇಟಿ ಬಚಾವೋ’ ಆಂದೋಲನ ನಡೆಸುತ್ತಿದ್ದಾರೆ ದಿಲ್ಲಿಯ ಯುವಕರು
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ
ಭಟ್ಕಳ, ಜೂ.23: ಹೆಣ್ಣು ಮಕ್ಕಳ ಶಿಕ್ಷಣ ಕುರಿತಂತೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಬೇಟಿ ಬಜಾವೋ ಬೇಟಿ ಪಢಾವೋ’ ಕಾಶ್ಮಿರದಿಂದ ಕನ್ಯಕುಮಾರಿವರೆಗಿನ ಸೈಕಲ್ಜಾಥಾ ಭಟ್ಕಳ ಪ್ರವೇಶಿಸಿತು.
ದಿಲ್ಲಿ ಮೂಲದ ಯುವಕರಾದ ಆಕಾಶ್ಒಸ್ಮಾನ್ ಹಾಗೂ ನವೀನ್ ಗೌತಮ್ ಮೇ 16 ರಂದು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಸೈಕಲ್ ಮೂಲಕ ‘‘ಬೇಟಿ ಬಚಾವೋ- ಬೇಟಿ ಪಡಾವೋ’’ ಎಂಬ ಸಂದೇಶ ಜಾಥಾವನ್ನು ಪ್ರಾರಂಭಿಸಿದ್ದಾರೆ. ಇವರ ಈ ಸಂದೇಶದಜಾಥಾವು ಕಾಶ್ಮೀರದಿಂದ ಆರಂಭಗೊಂಡು ಪಂಜಾಬ್, ಹರಿಯಾಣ, ದಿಲ್ಲಿ, ರಾಜಸ್ಥಾನ, ಗುಜರಾತ್ನಿಂದ ಕರ್ನಾಟಕಕ್ಕೆ ತಲುಪಿದೆ.
ಬುಧವಾರ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಬಂದು ತಲುಪಿದ್ದು, ತಾಲೂಕಿನಲ್ಲಿ ಕೆಲ ಸಮಯ ಕಳೆದು ಹೆನ್ಣುಮಕ್ಕಳ ರಕ್ಷಣೆ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದರು. ಈ ಯುವಕರ ಸೈಕಲ್ ಜಾಥಾವು 40 ದಿನಗಳಲ್ಲಿ 4,000 ಕಿ.ಮೀ ನಷ್ಟು ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನವೀನ್ಗೌತಮ್, ಈಗಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು, ಹೆಣ್ಣಿಗೆ ಸಮಾಜದಲ್ಲಿ ಯಾವುದೇ ರೀತಿಯಲ್ಲೂ ರಕ್ಷಣೆ ಇಲ್ಲದಂತಾಗಿದೆ. ಅದೇ ರೀತಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕೊನೆಯಿಲ್ಲದಂತಾಗಿದೆ. ಭ್ರೂಣ ಹತ್ಯೆ, ಹೆಣ್ಣು ಮಗುವಿಗೆ ಶಿಕ್ಷಣ ದೊರಕಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸೈಕಲ್ಜಾಥಾವನ್ನು ಪ್ರಾರಂಭಿಸಿದ್ದೇವೆ ಎಂಬ ಸಂದೇಶವನ್ನು ನೀಡಿದರು.
ಯುವಕರು ಸೈಕಲ್ಗೆ ಕಾಲ್ಗೆಜ್ಜೆಯನ್ನು ಕಟ್ಟಿಕೊಂಡು ಬಂದಿದ್ದು, ಈ ಬಗ್ಗೆ ಕೇಳಿದಾಗ ಕಾಲ್ಗೆಜ್ಜೆಯ ನಾದ ಹೇಗೆ ಶಬ್ಧತರಂಗವಾಗಿ ಹೊರಡಿಸುತ್ತದೆಯೋ ಅದೇರೀತಿ ಸಮಾಜದಲ್ಲಿ ಒಂದು ಹೆಣ್ಣು ಸಹ ಸಮಾಜದಲ್ಲಿ ತಲೆಎತ್ತಿ, ಅವಳಿಗೆ ಸಿಗಬೇಕಾದ ರಕ್ಷಣೆ ಜೊತೆಗೆ ಮುಖ್ಯವಾಹಿನಿಗೆ ಬಂದು ಅವಳು ಸಹ ಪುರುಷರಂತೆ ಸಹಬಾಳ್ವೆ ನಡೆಸಬೇಕೆಂಬ ಸಂದೇಶ ಸಾರುತ್ತದೆ.
ಇಬ್ಬರ ಪೈಕಿ ಓರ್ವ ಒಬ್ಬಾತ ಕೊಳಲು ವಾದಕನಾಗಿದ್ದು, ‘‘ಬೇಟಿ ಬಚಾವೋ- ಬೇಟಿ ಪಡಾವೋ’’ ಎಂಬ ಸಂದೇಶವನ್ನು ತನ್ನ ವಿಶಿಷ್ಟ ಕಲೆಯ ಮೂಲಕ ಸಾರುತ್ತಿದ್ದಾರೆ. ಮಾರ್ಗ ಮಧ್ಯೆ ಸಿಗುವ ಶಾಲಾ-ಕಾಲೇಜುಗಳಿಗೆ ಭೇಟಿನೀಡಿ ‘‘ಬೇಟಿ ಬಚಾವೋ- ಬೇಟಿ ಪಡಾವೋ’’ ಬಗ್ಗೆ ಕರ ಪತ್ರ ನೀಡುತ್ತಾ ಸಾಗುತ್ತಿದ್ದಾರೆ.