ಮೈಸೂರು ಪೊಲೀಸ್ ಕಮಿಷನರ್ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಎಚ್.ವಿಶ್ವನಾಥ್
ಮೈಸೂರು, ಮಾ.25: ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಿದ ಪೊಲೀಸ್ ಆಯುಕ್ತರ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕ್ ಸವಾರನನ್ನ ಸಾಯಿಸಿದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ. ನೀನು ಯಾವ್ ಸೀಮೆ ಕಮಿಷನರಯ್ಯ..? ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು. ಹೀಗೆ ಪೊಲೀಸ್ ಕಮಿಷನರ್ ವಿರುದ್ಧ ಎಂಎಲ್ಸಿ ಎಚ್.ವಿಶ್ವನಾಥ್ ಏಕವಚನದಲ್ಲಿ ಹರಿಹಾಯ್ದಿದ್ದಾರೆ.
ಈ ಸಂಬಂಧ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ, ಸಿಟಿ ರೌಂಡ್ ಹಾಕಲ್ಲ. ಎಷ್ಟು ವರ್ಷ ಆಯ್ತು ಬಂದು. ಎಷ್ಟು ಜನ ಡಿಸಿಪಿ, ಎಸಿಪಿಗಳಿದ್ದೀರಿ ಏನ್ ಮಾಡ್ತಿದ್ದೀರಿ. ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ. ಜನಪ್ರತಿನಿಧಿಗಳು, ಜನರ ಬಗ್ಗೆ ಗೌರವ ಇಲ್ಲ. ಈ ನಡುವೆ ಸದನದಲ್ಲಿ ಚರ್ಚೆಯೂ ಆಗಿಲ್ಲ, ನಿನ್ನೆ ಸಿಡಿ ಇಟ್ಕೊಂಡು ವಿಷ್ಣು ಚಕ್ರ ತಿರುಗಿಸಿದ್ದಾರೆ. ಮೈಸೂರಿನಲ್ಲಿ ನಡೆದ ನಿನ್ನೆಯ ಘಟನೆ ಖಂಡನೀಯ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಪೊಲೀಸರು ದಾರಿ ತಪ್ಪುತ್ತಿದ್ದಾರೆ. ಓಡಾಡಿಸಿಕೊಂಡು ವಾಹನ ಹಿಡಿಯೋದನ್ನು ಬಿಡಬೇಕು. ತಪ್ಪಿಸಿಕೊಂಡು ಓಡಿ ಹೋದರೆ ಕ್ಯಾಮರಾ, ಸಿಸಿ ಕ್ಯಾಮರಾ ಇಲ್ವ. ತಪಾಸಣೆ ಮಾಡಿ ಆದರೆ ಕ್ಯಾಮರಾ ಇರೋದು ಯಾಕೆ. ಈ ಸಂಬಂಧ ನಾನು ಗೃಹ ಸಚಿವರು, ಜಿಲ್ಲಾ ಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.