10 ಕೋಟಿ ರೂ. ಪಡೆದು ಬಸವಕಲ್ಯಾಣದಲ್ಲಿ ಮುಸ್ಲಿಮ್ ಅಭ್ಯರ್ಥಿ ಹಾಕಿದ ಜೆಡಿಎಸ್: ಝಮೀರ್ ಅಹ್ಮದ್ ಆರೋಪ
‘ಕುಮಾರಸ್ವಾಮಿ ಬಿಜೆಪಿ ಏಜೆಂಟ್’
ಬಸವಕಲ್ಯಾಣ, ಮಾ.30: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯ ಏಜೆಂಟ್ ಕೆಲಸ ಮಾಡಿ, ಅವರಿಂದ 10 ಕೋಟಿ ರೂ.ಗಳನ್ನು ಪಡೆದುಕೊಂಡು ಬಸವಕಲ್ಯಾಣದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಝೆಡ್.ಝಮಿರ್ ಅಹ್ಮದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ನಾರಾಯಣರಾವ್ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಬಳಿ ದುಡ್ಡಿಲ್ಲ, ಆದುದರಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದಿದ್ದರು ಎಂದರು.
ಈ ಉಪ ಚುನಾವಣೆಯಲ್ಲಿ ಜೆಡಿಎಸ್ನವರು ಎಲ್ಲಿಯೂ ತಮ್ಮ ಅಭ್ಯರ್ಥಿಯನ್ನು ಇಳಿಸಿಲ್ಲ. ಮಸ್ಕಿ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿಯೂ ಅಭ್ಯರ್ಥಿ ಹಾಕಬಹುದಿತ್ತು. ಆದರೆ, ಕೇವಲ ಬಸವಕಲ್ಯಾಣದಲ್ಲಿ ಮಾತ್ರ ಅಭ್ಯರ್ಥಿ ಹಾಕಿದ್ದಾರೆ. ಕುಮಾರಸ್ವಾಮಿ ಅವರೇ ಈಗ ಅಭ್ಯರ್ಥಿಯನ್ನು ಹಾಕಲು ನಿಮಗೆ ದುಡ್ಡು ಎಲ್ಲಿಂದ ಬಂತು? ಎಂದು ಅವರು ಪ್ರಶ್ನಿಸಿದರು.
ದೇವೇಗೌಡರ ರಾಜಕೀಯದ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಅವರ ರಾಜಕೀಯವೇ ಬೇರೆ, ಅವರು ದೊಡ್ಡವರು. ಕುಮಾರಸ್ವಾಮಿ ಬಿಜೆಪಿ ಏಜೆಂಟ್ ಆಗಿದ್ದಾರೆ. ಆ ದಲ್ಲಾಳಿ ಕೆಲಸ ಮಾಡಿದ್ದಕ್ಕೆ ಸಿಕ್ಕ ದುಡ್ಡಲ್ಲಿ ಅಭ್ಯರ್ಥಿ ಹಾಕಿದ್ದಾರೆ. 2 ಕೋಟಿ ರೂ.ನಿನ್ನೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರೇ ದುಡ್ಡು ಬೇಕು, ಆದರೆ ಈ ತರಹ ದುಡ್ಡು ಯಾಕೆ ಬೇಕು? ನೀವು ಮಾಜಿ ಮುಖ್ಯಮಂತ್ರಿ. ನಿಮ್ಮ ಬಗ್ಗೆ ಈ ರೀತಿ ನಾವು ಮಾತನಾಡಬೇಕಾದರೆ ನಾಚಿಕೆಯಾಗುತ್ತೆ ಎಂದು ಅವರು ಕಿಡಿಗಾರಿದರು.
ಜನತಾದಳ ಮುಸ್ಲಿಮರನ್ನು ಬಳಸಿಕೊಂಡು ರಸ್ತೆಯಲ್ಲಿ ಬಿಟ್ಟು ಹೋಗಿರುವ ಅನೇಕ ಉದಾಹರಣೆಗಳಿವೆ. ಜೆಡಿಎಸ್ ಅಭ್ಯರ್ಥಿಯಾಗಿರುವ ಅಲಿಸಾಬ್ ಸಾರ್ವಜನಿಕರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ನಿಮಗೆ ಸಮುದಾಯ, ಜಾತ್ಯತೀತ ತತ್ವದ ಮೇಲೆ ನಂಬಿಕೆಯಿದ್ದರೆ ನಿಮ್ಮ ನಾಮಪತ್ರವನ್ನು ಹಿಂಪಡೆದುಕೊಳ್ಳಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.