ರಾಜೀನಾಮೆ ನೀಡಿ ಹೊರಗೆ ಹೋಗಿ ಟೀಕೆ ಮಾಡಲಿ: ಬಿಜೆಪಿ ಶಾಸಕ ಯತ್ನಾಳ್ಗೆ ಸಚಿವ ನಿರಾಣಿ ಸವಾಲು
ಮುರುಗೇಶ್ ಆರ್.ನಿರಾಣಿ / ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು/ಬೆಳಗಾವಿ, ಎ. 3: ‘ಪಕ್ಷದ ಚಿನ್ನೆ ಮತ್ತು ನಮ್ಮ ಮುಖಂಡರ ಫೋಟೋಗಳನ್ನು ಹಾಕಿಕೊಂಡು ಆಯ್ಕೆಯಾಗಿ ಬಂದು, ಇದೀಗ ಪಕ್ಷದ ಹಿರಿಯ ವಿರುದ್ಧ ಟೀಕೆ ಮಾಡುವುದು, ಪಕ್ಷಕ್ಕೆ ಅನ್ಯಾಯ ಮಾಡುವುದು ಸಲ್ಲ. ಅವರಿಗೆ ಟೀಕೆ ಮಾಡಲೇಬೇಕೆಂದಿದ್ದರೆ ರಾಜೀನಾಮೆ ನೀಡಿ ಹೊರಗೆ ಹೋಗಿ ಮಾತನಾಡಲಿ' ಎಂದು ಸಚಿವ ಮುರುಗೇಶ್ ಆರ್.ನಿರಾಣಿ, ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಸವಾಲು ಹಾಕಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ವಿರುದ್ಧ ಮನಸೋ ಇಚ್ಛೆ ಮಾತನಾಡುವುದು ಉಂಡ ಮನೆಗೆ ದ್ರೋಹ ಮಾಡಿದಂತೆ. ಯಾರಾದರೂ ನಾಲಾಯಕ್ ಇದ್ದರೆ ಅದು ವಿಜಯಪುರದವ. ಆತ ಬಹಳ ಹಿರಿಯ. ಇನ್ಮುಂದೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಹೇಳದೆ ಎಚ್ಚರಿಸಿದರು.
‘ಆತ ಏನೆಂದು ತಿಳಿದುಕೊಂಡಿದ್ದಾನೆ? ಪಕ್ಷದ ಹೈಕಮಾಂಡ್ ಸುಮ್ಮನಿದೆ ಎಂದು ಮನಸೋ ಇಚ್ಛೆ ಮಾತನಾಡುವುದು ಶೋಭೆಯಲ್ಲ. ಆತ ಮುಂದೆಯೂ ಸುಧಾರಿಸದಿದ್ದರೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ. ಇವರ ಎಲ್ಲ ನಡವಳಿಕೆಗಳನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ' ಎಂದು ಮುರುಗೇಶ್ ನಿರಾಣಿ ಇಂದಿಲ್ಲಿ ಹೇಳಿದರು.