ಮಡಿಕೇರಿ : 7 ಮಂದಿಯ ಸಜೀವ ದಹನಕ್ಕೆ ಕಾರಣವಾಗಿದ್ದ ಭೋಜ ಶವವಾಗಿ ಪತ್ತೆ
'ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ' ಎಂದು ಮಗಳಿಗೆ ಕರೆ ಮಾಡಿದ್ದ ಭೋಜ
ಭೋಜ
ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ಮುಗುಟಗೇರಿಯಲ್ಲಿ ಎ.3 ರಂದು ಮನೆಯ ಹೆಂಚು ತೆಗೆದು ಪೆಟ್ರೋಲ್ ಸುರಿದು 7 ಮಂದಿ ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಆರೋಪಿ ಮಣಿ ಎರವರ ಭೋಜ (55) ಎಂಬಾತನ ಮೃತದೇಹ ಮಂಗಳವಾರ ಮುಂಜಾನೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
''ನಿನ್ನ ಅಮ್ಮ ನನ್ನು 2 ವಾರದಿಂದ ಕರೆದರೂ ಬರಲಿಲ್ಲ, ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು” ಹೀಗೆಂದು ತನ್ನ ಮಗಳೊಂದಿಗೆ ಮೊಬೈಲ್ ಕರೆ ಮಾಡಿ ಬೋಜ ಮಾತನಾಡಿದ್ದು, ಈ ಆಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾತು ಮುಂದುವರೆಸಿರುವ ಬೋಜ “ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು, ಈಗ ನಾನು ಕೂಡ ಸಾಯ್ತೀನಿ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ.
ತನಿಖೆಯ ವೇಳೆ ಈ ಆಡಿಯೊ ತುಣುಕು ಬಹಿರಂಗಗೊಂಡಿದೆ. ಇದೀಗ ಬೋಜ ಆತ್ಮಹತ್ಯೆಗೆ ಶರಣಾಗಿರುವುದು ಖಾತ್ರಿಯಾಗಿದ್ದು, ಪೊನ್ನಂಪೇಟೆ ಸಮೀಪ ತಾನಿದ್ದ ಲೈನ್ ಮನೆಯ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತೋಲ ಅವರ ಪತ್ನಿ ಭಾಗ್ಯ (28) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಮೃತಪಟ್ಟಿದ್ದಾರೆ. ಮುಗುಟಗೇರಿ ಘಟನೆಯಲ್ಲಿ ಮೃತರಾದವರ ಸಂಖ್ಯೆ ಈಗ 7ಕ್ಕೆ ಏರಿಕೆಯಾಗಿದೆ.