ಮುಂದುವರಿದ ಬಸ್ ಮುಷ್ಕರ: ವಿವಿಧ ವಿಭಾಗಗಳಿಂದ ಹಲವು ಸಾರಿಗೆ ನೌಕರರ ವರ್ಗಾವಣೆ
ಬೆಂಗಳೂರು, ಎ.10: ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಮುಂದುವರಿದಿದ್ದು, ಮುಷ್ಕರಕ್ಕೆ ಪ್ರಚೋದನೆ ಹಿನ್ನೆಲೆ ಹಲವು ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಪ್ರಮುಖವಾಗಿ ರಾಜ್ಯ ಸರಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವ ಕಾರಣ ಮುಷ್ಕರಕ್ಕೆ ಇನ್ನೂ ತೆರೆಬಿದ್ದಿಲ್ಲ.
ರಾಜ್ಯದೆಲ್ಲೆಡೆ ಕಳೆದ ನಾಲ್ಕು ದಿನಗಳಿಂದಲೂ ಖಾಸಗಿ ವಾಹನಗಳ ಮೇಲೆ ಅವಲಂಬಿತವಾಗಿರುವ ಪ್ರಯಾಣಿಕರು, ಯುಗಾದಿ ಹಬ್ಬ ಜತೆಗೆ ಸರಣಿ ರಜೆ ಕಾರಣದಿಂದಾಗಿ ಸ್ವಗ್ರಾಮಗಳಿಗೆ ತೆರಳಲು ಶನಿವಾರ ತುಸು ಹೆಚ್ಚಿನ ದರವೇ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು,
ಬೆಂಗಳೂರು ಸೇರಿದಂತೆ ಹಲವು ನಗರದ ಕೇಂದ್ರ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ದರ್ಬಾರ್ ಜೋರಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ವಾಹನಗಳನ್ನು ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ಓಡಾಟ ಜೋರಾಗಿದೆ.
ಸರಣಿ ರಜೆಗಳಿರುವ ಕಾರಣದಿಂದಾಗಿ ಶನಿವಾರ ಬೆಳಗ್ಗೆಯಿಂದಲೂ ಖಾಸಗಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು. ಹೊರರಾಜ್ಯಗಳಿಗೆ ಓಡಾಟ ನಡೆಸುತ್ತಿದ್ದ ಕೆಲವು ಖಾಸಗಿ ಬಸ್ಗಳು ಸಹ ನಗರದೆಲ್ಲೆಡೆ ಸಂಚರಿಸಿದವು.
ಆಂಧ್ರ ಸಾರಿಗೆಗೆ ಬೇಡಿಕೆ: ಬೆಂಗಳೂರಿಗೆ ತೆರಳುತ್ತಿದ್ದ ಆಂಧ್ರಪ್ರದೇಶದ ಸಾರಿಗೆ ಬಸ್ಗಳಲ್ಲಿಯೂ ಜನರು ಪ್ರಯಾಣಿಸಿದರು. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ, ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶದಕ್ಕೆ ಸಾಗುವ ಬಸ್ಗಳಲ್ಲಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದರು. ಇಲ್ಲಿನ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಶಾಂತಿನಗರ ಸೇರಿದಂತೆ ಹಲವು ಬಸ್ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ನಗರದೊಳಗೆ ಮಾತ್ರವಲ್ಲದೇ, ಹೊರವಲಯದಿಂದ ನಗರಕ್ಕೆ ಬರಲು ಆಟೊಗಳನ್ನು ಅವಲಂಬಿಸಿದ್ದರು. ಸೀಟ್ ಆಟೊಗಳಲ್ಲಿ ಜನ ಜಂಗುಳಿಯಿತ್ತು. ಹಾಗೇ, ಬಸ್ಗಳ ಮುಷ್ಕರ ದಿಂದ ವಾಹನಗಳ ಮೇಲೆ ಕುಳಿತು ಪ್ರಯಾಣಿಸುವ ದೃಶ್ಯವೂ ಶನಿವಾರವೂ ಸಾಮಾನ್ಯವಾಗಿತ್ತು.
88 ನೌಕರರ ವರ್ಗಾವಣೆ
ಈಗಾಗಲೇ ಮುಷ್ಕರ ನಿರತರಿಗೆ ವರ್ಗಾವಣೆಯ ಶಿಕ್ಷೆಯನ್ನು ವಿಧಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಇದೀಗ 88 ನೌಕರರನ್ನು ವಿವಿಧೆಡೆಗೆ ವರ್ಗಾವಣೆಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.
'ನಿಗಮವು ಮುಷ್ಕರದಲ್ಲಿ ಪಾಲ್ಗೊಳ್ಳಲು ಇತರೆ ನೌಕರರನ್ನು ಪ್ರಚೋದಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗಳಿಗೆ ಬೆದರಿಕೆವೊಡ್ಡಿ ನಿಗಮದ ಬಸ್ಸುಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದನ್ನು ಸಹಿಸುವುದಿಲ್ಲ. ಹೀಗೆ ಮಾಡಿದ ಸಂಸ್ಥೆಯ 73 ಚಾಲಕರು ಮತ್ತು ನಿರ್ವಾಹಕರು, 4 ಜನ ಸಂಚಾರಿ ಮೇಲ್ವಿಚಾರಕ ಸಿಬ್ಬಂದಿಗಳು ಹಾಗೂ 11 ತಾಂತ್ರಿಕ ಸಿಬ್ಬಂದಿಗಳನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಭಾಗಗಳಿಂದ ಬೇರೆ ವಿಭಾಗಗಳಿಗೆ ಕೂಡಲೇ ಜಾರಿಗೆ ಬರುವಂತೆ ವರ್ಗಾಯಿಸುವ ಕ್ರಮ ಕೈಗೊಂಡಿರುತ್ತದೆ' ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮತ್ತೆ ಹಲವು ನೌಕರರ ಸೇವೆ ವಜಾ
6ನೆ ವೇತನ ಆಯೋಗದ ಜಾರಿಗಾಗಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಬಿಎಂಟಿಸಿ ಬಿಸಿ ಮುಟ್ಟಿಸಿದ್ದು, ಶನಿವಾರವೂ 60 ತರಬೇತಿ ನೌಕರರು, 58 ಪ್ರೊಬೇಷನರಿ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ.