ಇನ್ನೊಂದು ತಿಂಗಳು ಪ್ರತಿಭಟಿಸಿದರೂ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ
ಸಾರಿಗೆ ನೌಕರರ ಮುಷ್ಕರ
ಬೆಂಗಳೂರು: ಇನ್ನೊಂದು ತಿಂಗಳು ಪ್ರತಿಭಟನೆ ನಡೆಸಿದರೂ ಸಾರಿಗೆ ನೌಕರರ ಆರನೇ ವೇತನದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರ ನಿರತ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ, ಅವರೊಂದಿಗೆ ಮಾತುಕತೆಯೂ ಇಲ್ಲ. ಅಲ್ಲದೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ರೀತಿ ಮುಷ್ಕರ ಮಾಡಿ ಜನರಿಗೆ ತೊಂದರೆ ಮಾಡುತ್ತಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದರು.
ಯಾವ ಕಾರಣಕ್ಕೂ ಮುಷ್ಕರ ನಿರತ ನೌಕರರಿಗೆ ವೇತನ ಬಿಡುಗಡೆ ಮಾಡಲ್ಲ. ಕೆಲಸ ಮಾಡಿದವರಿಗೆ ಮಾತ್ರ ವೇತನ ನೀಡಲಾಗುತ್ತದೆ. ಸಾರಿಗೆ ಸೇವೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ. ಯಾವ ಕಾರಣಕ್ಕೂ ಆರನೇ ವೇತನದ ಅನ್ವಯ ಸಂಬಳ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಯಾರ ಮಾತು ಕೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ ಯಾರನ್ನೂ ಕರೆದು ಮಾತನಾಡುವ ಪ್ರಮೆಯವೇ ಇಲ್ಲ. ಇನ್ನು ಒಂದು ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವ ಪ್ರಮೇಯ ಇಲ್ಲ ಎಂದು ಸಂಧಾನ ಸಭೆಯ ಸಾಧ್ಯತೆಯನ್ನು ತಳ್ಳಿ ಹಾಕಿದರು.