ಹಾಸನ: ಅಗತ್ಯ ವಸ್ತು ಬಿಟ್ಟು ಉಳಿದೆಲ್ಲಾ ವ್ಯಾಪಾರ ವಹಿವಾಟು ಬಂದ್; ಮೇ.4ರವರೆಗೂ ಲಾಕ್ಡೌನ್
ಹಾಸನ, ಎ.22: ದಿನೇ ದಿನೇ ಕೊರೋನ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಸನದಲ್ಲಿ ಮೇ.4ರ ವರೆಗೆ ಅಗತ್ಯ ವಸ್ತುಗಳ ಹೊರತಾಗಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟು ಬಂದ್ ಮಾಡುವುದರ ಮೂಲಕ ಹಾಸನವನ್ನು ಲಾಕ್ಡೌನ್ ಮಾಡಲು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದ್ದಾರೆ.
ವ್ಯಾಪಕವಾಗಿ ಕೊರೋನ ಹರಡುತ್ತಿರುವುದರಿಂದ ಸರಕಾರದ ಆದೇಶದಂತೆ ಮೇ.4ರ ವರೆಗೂ ಹಾಸನ ಜಿಲ್ಲೆಯಾದ್ಯಂತ ಕಠಿಣ ರೂಲ್ಸ್ ಜಾರಿ ಮಾಡಲಾಗಿದ್ದು, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ ಶಾಪ್ ಗಳು ಸೇರಿ ಜೀವನಾವಶ್ಯಕ ಅಲ್ಲದ ಎಲ್ಲಾ ಅಂಗಡಿಗಳ ಬಂದ್ ಮಾಡುವಂತೆ ಆದೇಶಿಸಲಾಗಿದೆ. ದಿನಸಿ, ಹಾಲು, ಮಾಂಸ, ಮೀನು ಮಾರಾಟ ಹಾಗೂ ಕೃಷಿ ಮತ್ತು ಕಟ್ಟಡ ನಿರ್ಮಾಣ ಸಂಬಂಧದ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ ಗುರುವಾರದಂದು ಬೆಳಗಿನಿಂದಲೇ ಪೊಲೀಸ್ ಇಲಾಖೆ, ನಗರಸಭೆ, ಗೃಹಸೇವಾದಳ ಇತರರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು. ಜಿಲ್ಲಾಧಿಕಾರಿಗಳ ಕ್ರಮ ದಿಂದಾಗಿ ವರ್ತಕರು ಕಂಗಾಲಾಗಿದ್ದಾರೆ. ರಾಜ್ಯ ಸರಕಾರ ವೀಕೆಂಡ್ ಕರ್ಫ್ಯೂಗೆ ಆದೇಶಿಸಿದೆ, ಆದರೆ ಜಿಲ್ಲಾಡಳಿತ ನಿತ್ಯ ಕರ್ಫ್ಯೂಗೆ ಮುಂದಾಗಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಂದ್ ಕಾರ್ಯಾಚರಣೆ ಇದೇ ವೇಳೆ ನಗರಸಭೆ ಆರೋಗ್ಯಾಧಿಕಾರಿಗಳಾದ ಆದೀಶ್, ಮಂಜುನಾಥ್, ಪ್ರಸಾದ್, ಸೂಪರವೈಸರ್ ಸುಹಾಸ್, ಬಿ.ಜಿ. ಮಂಜೂಳಾ, ಹೆಚ್.ಎನ್. ಮಹಾದೇವ್, ನರಸಿಂಹ ಮೂರ್ತಿ, ಪ್ರೇಮ, ಪುಟ್ಟರಾಜು, ಕುಮಾರ್ ಇತರರು ಉಪಸ್ಥಿತರಿದ್ದರು.