ಕೋಲಾರದಲ್ಲಿ ಆಕ್ಸಿಜನ್, ಬೆಡ್ಗಾಗಿ ರೋಗಿಗಳ ಪರದಾಟ: ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ: ಆರೋಪ
ಕೋಲಾರ, ಎ.29: ಕೊರೋನ 2ನೇ ಅಲೆಯಿಂದ ದಿನೇ ದಿನೇ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೋಂಕಿಗೆ ಒಳಗಾದ ಜನತೆ ಜೀವ ಉಳಿಸಿಕೊಳ್ಳಲು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್ಗಳ ಕೊರತೆಯಿಂದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ.
ಸುಮಾರು 16 ಲಕ್ಷ ಜನ ಸಂಖ್ಯೆ ಇರುವ ಕೋಲಾರ ಜಿಲ್ಲೆಯಲ್ಲಿ ಐದು ತಾಲೂಕು ಆಸ್ಪತ್ರೆಗಳು ಹಾಗೂ ಒಂದು ಜಿಲ್ಲಾಸ್ಪತ್ರೆ ಮತ್ತು ಒಂದು ಖಾಸಗಿ ವೈದ್ಯಕೀಯ ಕಾಲೇಜು ಸೇರಿದಂತೆ ಸೀಮಿತ ಹಾಸಿಗೆ ಸೌಲಭ್ಯಗಳ ನರ್ಸಿಂಗ್ ಹೋಂಗಳು ಮಾತ್ರ ಇದ್ದು, ಅಗತ್ಯ ಪೂರೈಸುವಷ್ಟು ಚಿಕಿತ್ಸಾ ಸೌಲಭ್ಯಗಳುಳ್ಳ ವ್ಯವಸ್ಥೆ ಮರೀಚಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಕೋವಿಡ್ ನಿಂದ ಪ್ರಾಣ ಕಳೆದುಕೊಂಡಿದ್ದರೂ ಸರಕಾರಿ ಅಂಕಿ ಅಂಶಗಳು ಸತ್ಯಾಂಶಕ್ಕೆ ದೂರವಾಗಿವೆ ಎಂಬ ಆರೋಪ ಕೇಳಿ ಬರುತ್ತಿವೆ.
6 ಸಾವಿರ ಟೆಸ್ಟ್ ರಿಪೋರ್ಟ್ಸ್ ಬ್ಯಾಕ್ ಲಾಗ್: ಕೋಲಾರ ಸಂಸದ ಎಸ್.ಮುನಿಸ್ವಾಮಿಯವರೇ ಖುದ್ದು ಡಿಸಿಎಂ ಅಶ್ವತ್ಥನಾರಾಯಣ ಅವರೊಂದಿಗೆ ಸ್ಥಿತಿಗತಿಗಳ ಸಭೆಯಲ್ಲಿ ಹಂಚಿಕೊಂಡಂತೆ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಜನರ ಸ್ವಾಬ್ ತೆಗೆದುಕೊಂಡಿದ್ದು, ಟೆಸ್ಟ್ ರಿಪೋರ್ಟ್ಸ್ ಮಾಡದೆ ಬ್ಯಾಕ್ಲಾಗ್ನಲ್ಲಿ ಇನ್ನೂ ಇವೆ. ಈ ನಡುವೆ ಕೋವಿಡ್ ಲಕ್ಷಣಗಳ ಆಧಾರದಲ್ಲಿ ಟೆಸ್ಟ್ ರಿಪೋರ್ಟ್ ಇಲ್ಲದೆ ಇದ್ದರೂ ಕೋವಿಡ್ ವಾರ್ಡ್ನಲ್ಲಿ ದಾಖಲಾಗಿ ಅಲ್ಲಿ ಸರಿಯಾಗಿ ಶುಶ್ರೂಷೆ ಸಿಗದೆ, ಆಮ್ಲ ಜನಕ ಸಿಗದೆ ಜನ ಸಾಲು ಸಾಲಾಗಿ ಸಾಯುತ್ತಿರುವುದು ಜರಿಗೆ ಆತಂಕ ಹೆಚ್ಚಲು ಕಾರಣವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಸುಮಾರು 200 ಕೋವಿಡ್ ಬೆಡ್ಗಳು ಲಭ್ಯವಿದ್ದು ಪ್ರತಿ ದಿನ ಡಿಸ್ಚಾರ್ಜ್ ಆದವರ ಬೆಡ್ಗೆ ಹೊಸ ರೋಗಿಗಳನ್ನು ತುಂಬಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮತ್ತೊಂದು ಕಡೆ ಐಸಿಯು ವಾರ್ಡ್ಗಳಲ್ಲಿ ಚಿಕಿತ್ಸೆಗಾಗಿ ದೊಡ್ಡ ಮಟ್ಟದ ಲಾಬಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿರುವ ಸಿಬ್ಬಂದಿ ಕೋವಿಡ್ ವಾರ್ಡ್ಗೆ ಕೇವಲ ಮೂರು ನರ್ಸ್ಗಳು ಮಾತ್ರ, 6 ಕೋವಿಡ್ ವಾರ್ಡ್ಗಳಿಗೆ 3 ಜನ ದಾದಿಯರು ಕೆಲಸ ನಿರ್ವಹಿಸುವುದು ಬಹಳ ತ್ರಾಸದಾಯಕವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ಸೂಕ್ತ ಸಮಯದಲ್ಲಿ ಸಿಗದೇ ಹೋಗಿದೆ. ಇನ್ನು ವೈದ್ಯರು ಎರಡು ದಿನಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ ಎನ್ನಲಾಗಿದ್ದು, ರೋಗಿಗಳು ತಮಗೆ ಆಗುತ್ತಿರುವ ಸಮಸ್ಯೆ ಹೇಳಿಕೊಳ್ಳಲಾಗದೆ ಭಯದಿಂದಲೇ ಸಾಯವ ಸ್ಥಿತಿಗೆ ತಲುಪಿದ್ದಾರೆ.
ಬಳಕೆಯಾಗದ ವೆಂಟಿಲೇಟರ್: ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ 40 ವೆಂಟಿಲೇಟರ್ಗಳಿದ್ದರೂ ಬಳಕೆಯಾಗದೆ ಮೂಲೆಗೆ ಬಿದ್ದಿವೆ. ಎಲ್ಲವೂ ಹೊಸ ವೆಂಟಿಲೇಟರ್ಗಳೇ ಆದರೆ, ಅದನ್ನು ಸರಿಯಾಗಿ ಬಳಸುವ ಸಿಬ್ಬಂದಿಯ ಕೊರತೆಯಿಂದ ಹಾಗೂ ಆಕ್ಸಿಜನ್ ಕೊರತೆಯಿಂದ ಬಳಕೆ ಸಾಧ್ಯವಾಗದೆ ಹೋಗಿದ್ದು, ಈ ಬಗ್ಗೆ ನಿರ್ಲಕ್ಷ ವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಜಿ.ನಾರಾಯಣಸ್ವಾಮಿ ಅಮಾನತ್ತುಗೊಂಡಿದ್ದರೂ ಇನ್ನೂ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ ಎಂದು ವರದಿಯಾಗಿದೆ.
ಆಮ್ಲಜನಕದ ಕೊರತೆ ಇಲ್ಲ: ಜಿಲ್ಲಾಸ್ಪತ್ರೆಯಲ್ಲಿ ಹತ್ತು ವರ್ಷಗಳಾದರೂ ಅಗತ್ಯ ಸಿಬ್ಬಂದಿಯನ್ನು ನೇಮಿಸುವಲ್ಲಿ ಸರಕಾರ ವಿಫಲವಾಗಿದೆ. ವಾಸ್ತವದಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ. ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಘಟಕವಿದ್ದು ಅಗತ್ಯವಿರುವಷ್ಟು ಆಮ್ಲಜನಕ ಉತ್ಪಾದನೆ ಆಗುತ್ತಿದೆ. ಅದರೆ, ಆಮ್ಲಜನಕ ಸರಬರಾಜು ಮಾಡುವ ಪೈಪ್ಲೈನ್ ಸಣ್ಣದಾಗಿದ್ದು, ಅಲ್ಲಲ್ಲಿ ಆಮ್ಲಜನಕ ಸೋರಿಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ?: ಆಸ್ಪತ್ರೆಯ ಸಿಬ್ಬಂದಿ ರೆಮ್ಡೆಸಿವಿರ್ ಚುಚ್ಚುಮದ್ದುಗಳನ್ನು ಕಾಳಸಂತೆಯಲ್ಲಿ ಖಾಸಗಿ ನರ್ಸಿಂಗ್ ಹೋಂಗಳಿಗೆ ಮಾರಾಟ ಮಾಡುತ್ತಿರುವ ದೊಡ್ಡ ಜಾಲ ಕಟ್ಟಿಕೊಂಡಿದ್ದು, ಜಿಲ್ಲಾಡಳಿತ ಅದರ ಕಡೆ ಗಮನ ಹರಿಸುತ್ತಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ..
ಅಲ್ಲದೆ, ಇಲ್ಲಿನ ಏಕೈಕ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಾದ ಆರ್.ಎಲ್.ಜಾಲಪ್ಪ ಹಾಸ್ಪಿಟಲ್ನಲ್ಲಿ ಕೋವಿಡ್ ಬೆಡ್ ಗಿಟ್ಟಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಕಾರಣ, ಸರಕಾರಿ ಕೋಟಾದಲ್ಲೇ ಬೆಂಗಳೂರಿನ ಶ್ರೀಮಂತ ವರ್ಗದವರು ದುಬಾರಿ ಬೆಲೆತೆತ್ತು ಬೆಡ್ಗಳು ಖರೀದಿ ಮಾಡುತ್ತಿರುವುದರಿಂದ ಸ್ಥಳೀಯರಿಗೆ ಬೆಡ್ ಲಭ್ಯತೆ ಇಲ್ಲವಾಗಿದೆ.
ರಸ್ತೆಯಲ್ಲೇ ಪ್ರಾಣ ಬಿಟ್ಟ ಮಹಿಳೆ: ಮುಳಬಾಗಿಲು ತಾಲೂಕಿನ ಸಂಗಂಡಹಳ್ಳಿ ಗ್ರಾಮದ ನೀಲಾವತಿ (48) ಎಂಬ ಮಹಿಳೆ ರಸ್ತೆಯಲ್ಲಿ ಕುಸಿದು ಬಿದ್ದು ಒದ್ದಾಡಿ ಸಾವನ್ನಪ್ಪಿದ್ದು, ಸಾರ್ವಜನಿಕರು ಮತ್ತು ಮೃತ ಮಹಿಳೆಯ ಪತಿ ಕೋವಿಡ್ ಭಯದಿಂದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲೂ ಹಿಂದೇಟು ಹಾಕಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತಾಯಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಾಕೇಶ್ ಕೊರೋನ ಪರೀಕ್ಷೆ ನಡೆಸಿ ಕೊರೋನ ಇಲ್ಲವೆಂದು ಖಾತ್ರಿಪಡಿಸಿದರೂ ಗ್ರಾಮಸ್ಥರು ಹಾಗೂ ಮೃತ ಮಹಿಳೆಯ ಪತಿ ಮುಟ್ಟಲೂ ಬರಲಿಲ್ಲ. ಕೊನೆಗೆ ತಹಶೀಲ್ದಾರ್ ಹಾಗೂ ಗ್ರಾಪಂ ಸಿಬ್ಬಂದಿ ಮೃತ ಮಹಿಳೆಯ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡರು.
ಅಸಂಘಟಿತ ಕಾರ್ಮಿಕರ ಪರದಾಟ: ಕೋವಿಡ್ ಕರ್ಫ್ಯೂನಿಂದ ದಿನಗೂಲಿ ಕಾರ್ಮಿಕರು ಪರದಾಡುವಂತಾಗಿದೆ. ಸರಕಾರ ಕಟ್ಟಡ ಕಾರ್ಮಿಕರಿಗೆ, ರೈತರಿಗೆ ಹಾಗೂ ಖಾಸಗಿ ಕಂಪೆನಿಗಳಿಗೆ ಅವಕಾಶ ಕಲ್ಪಿಸಿದರೂ, ಕಾರ್ಮಿಕರಿಗೆ ಉಪಯೋಗಕ್ಕಿಂತ ಅನಾನುಕೂಲವೇ ಆಗಿದೆ.
ತೆರೆಮರೆಯಲ್ಲಿ ಬಾಲ್ಯ ವಿವಾಹ: ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹಗಳು ಸದ್ದಿಲ್ಲದೇ ನಡೆಯುತ್ತಿದೆ. ಕೊರೋನ ಹಿನ್ನೆಲೆಯಲ್ಲಿ ಖರ್ಚಿಲ್ಲದೆ ಮದುವೆಗಳು ಬಹಳ ಗುಟ್ಟಾಗಿ ನಡೆಯುತ್ತಿರುವುದು ಕೇಳಿ ಬಂದಿದೆ.
ರೈತರು ಲಕ್ಷಾಂತರ ರೂ. ಬಂಡವಾಳ ಹಾಕಿ ಹೂವು, ತರಕಾರಿಗಳು ಬೆಳೆದಿದ್ದಾರೆ. ಇದೀಗ ಕೊರೋನ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಚೆಂಡು ಹೂವು, ಸೇವಂತಿಗೆ ಹೂವುಗಳನ್ನು ಕೊಳ್ಳುವವರಿಲ್ಲ. ಅದೇ ರೀತಿ ಟೊಮೆಟೊ, ಕೋಸು ಬೆಳೆಗಾರರು ಬೆಲೆ ಕುಸಿತದಿಂದ ನಷ್ಟಕ್ಕೀಡಾಗಿದ್ದಾರೆ. ತೋಟಗಳಲ್ಲೇ ಬೆಳೆಯನ್ನು ಒಣಗಲು ಬಿಟ್ಟಿದ್ದು, ಆಗಿರುವ ನಷ್ಟದಿಂದ ಕಂಗಾಲಾಗಿದ್ದಾರೆ. ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ.
- ನಳಿನಿಗೌಡ, ರೈತ ಮಹಿಳೆ
ನಾನು ಕೋವಿಡ್ ಸೋಂಕಿತಳಾಗಿ ಜಿಲ್ಲಾಸ್ತ್ರೆಯಲ್ಲಿ ದಾಖಲಾಗಿದ್ದೇನೆ. ಆಸ್ಪತ್ರೆಯಲ್ಲಿ ಸರಿಯಾಗಿ ರೋಗಿಗಳನ್ನು ಗಮನಿಸಿಕೊಳ್ಳಲು ಶುಶ್ರೂಷಕಿಯರು ಇಲ್ಲದೆ, ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವ್ಯವಸ್ಥೆ ಬಹಳ ಕೆಟ್ಟದಾಗಿದೆ. ಬೆಡ್ಗೆ ಬಂದು ನಾಲ್ಕು ಗಂಟೆಯಾದರೂ ಯಾರೂ ಕೂಡ ನಮ್ಮನ್ನು ವಿಚಾರಿಸುತ್ತಿಲ್ಲ. ಶುಚಿತ್ವದ ಕೊರತೆ ಇದೆ. ಆಕ್ಸಿಜನ್ ವ್ಯವಸ್ಥೆಯಲ್ಲಿ ಸರಿಯಿಲ್ಲ.
-ವಿ.ಗೀತಾ, ಜನವಾದಿ ಮಹಿಳಾ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷೆ
ಕೋವಿಡ್ ಬೆಡ್ಗಳು ಕೆಲವು ಮಾತ್ರ ಇವೆ. ಐಸಿಯು ಬೆಡ್ಗಳು ಒಂದೂ ಇಲ್ಲ. ಬೇಡಿಕೆ ಇದೆ. ಆದರೆ, ವ್ಯವಸ್ಥೆ ಮಾಡಲು ಕಷ್ಟವಾಗುತ್ತಿದೆ. ಎಲ್ಲೆಲ್ಲಿ ಲಭ್ಯವಿದೆಯೋ ಅಲ್ಲಿಗೆ ರೋಗಿಗಳನ್ನು ಕಳಿಸಿಕೊಟ್ಟು ಚಿಕಿತ್ಸೆ ಪಡೆಯಲು ಅನುವು ಮಾಡಲಾಗುತ್ತಿದೆಯಾದರೂ ಪೂರ್ಣ ಪ್ರಮಾಣದ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ.
-ಡಾ. ಜಗದೀಶ್, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಕೋಲಾರ