ಕೊರೋನ ಸೋಂಕಿತರ ಅನುಕೂಲಕ್ಕಾಗಿ 3 ಆ್ಯಂಬುಲೆನ್ಸ್ ಗಳನ್ನು ನೀಡಿದ ಸಿದ್ದರಾಮಯ್ಯ
Photo: Twitter.com/siddaramaiah
ಬಾಗಲಕೋಟೆ, ಮೇ 16: ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊರೋನ ಸೋಂಕಿತರ ಅನುಕೂಲಕ್ಕಾಗಿ ಮೂರು ಆ್ಯಂಬುಲೆನ್ಸ್ ಗಳನ್ನು ನೀಡಿದ್ದಾರೆ.
ರವಿವಾರ ಮೂರು ವಾಹನಗಳನ್ನು ತಾಲೂಕು ಆಡಳಿತಕ್ಕೆ ಆಧಿಕಾರಿಗಳ ಮೂಲಕ ಹಸ್ತಾಂತರಿಸಲಾಯಿತು. ಈ ಆ್ಯಂಬುಲೆನ್ಸ್ ಗಳು ಬಾದಾಮಿ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಕೋವಿಡ್ ಸೋಂಕಿತರಿಗೆ ನೆರವಾಗಲಿವೆ. ಇದೇ ವೇಳೆ ವೈದ್ಯರಿಗೆ 95 ಮಾಸ್ಕ್ ಗಳು, ಪಿಪಿಇ ಕಿಟ್ಗಳನ್ನು ವಿತರಣೆ ಮಾಡಲಾಯಿತು.
ಇನ್ನು ಕೊರೋನ ಸೋಂಕಿತರ ಅನುಕೂಲಕ್ಕಾಗಿ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಅವರು ಮುಖಂಡರಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವವರಿಗೆ ಹೆಲ್ಫ್ ಡೆಸ್ಕ್ ಆರಂಭಿಸಲು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಹಾಸ ಇಂಗಳೆ, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಲ್ಲನಗೌಡ ಪಾಟೀಲ, ಸಿಪಿಐ ರಮೇಶ ಹಾನಾಪುರ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ್, ಪಿಎಸ್ಐ ನೇತ್ರಾವತಿ ಪಾಟೀಲ ಮುಖಂಡರಾದ ಹೊಳಬಸು ಶೆಟ್ಟರ, ಮುಚಖಂಡಯ್ಯ ಹಂಗರಗಿ, ಮಹೇಶ ಹೊಸಗೌಡರ, ಪಿ.ಆರ್.ಗೌಡರ, ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಣ್ಣ ಯಲಿಗಾರ ಉಪಸ್ಥಿತರಿದ್ದರು.