ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ನಿಧನ
ಕಲಬುರಗಿ, ಮೇ 16: ಹಿರಿಯ ರಂಗಕಲಾವಿದೆ, ರಂಗ ನಿರ್ದೇಶಕಿ ಹಾಗೂ ಚಿತ್ರನಟಿ ಶೋಭಾ ರಂಜೋಳಕರ್(67) ರವಿವಾರ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಮೂಲತಃ ತೆಲಂಗಾಣದ ಕೋಡಂಗಲ್ನವರಾದ ಶೋಭಾ ಅವರನ್ನು ಸೇಡಂನ ರಂಜೋಳದ ಇಂಜಿನಿಯರ್ ಭೀಮರಾವ ಕುಲಕರ್ಣಿ ಅವರಿಗೆ ಮದುವೆ ಮಾಡಿಕೊಡಲಾಗಿತ್ತು.
ಇವರು ರಂಗಮಾಧ್ಯಮ ಕಲಾತಂಡ ಹಾಗೂ ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ನಿರ್ಮಿಸಿ ಅಭಿನಯಿಸಿದ್ದಾರೆ.
ಕಳೆದ ವರ್ಷ ಕಲಬುರಗಿ ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಎಲ್ಲ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ ಯುದ್ಧ ಭಾರತ ನಾಟಕವನ್ನು ಪ್ರದರ್ಶಿಸಿದ್ದರು. ಡಾ.ಚಂದ್ರಶೇಖರ ಕಂಬಾರರೊಂದಿಗೆ ಬೆಳದಿಂಗಳಾಗಿ ಬಾ ಸೇರಿ ಮಹಾದಾಸೋಹಿ ಶರಣಬಸವೇಶ್ವರ, ಗೌತಮ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಖರೋಖರ, ಅನೆಬಂತಾನೆ, ಹರಕೆ ಕುರಿ, ಚಾಲೂ ಆಹೆ, ಆಧುನಿಕ ದ್ರೋಣ, ಕಾಡು ಕುದುರೆ, ಶರಣು ಶರಣಾರ್ಥಿ, ನಾಪತ್ತೆಯಾದ ಪ್ರೇಮಪ್ರಸಂಗ, ಮಾತನಾಡುವ ಟೊಂಗೆಗಳು, ನೆಳಲಿಯ ಪ್ರಸಂಗ, ಜೈಸಿದನಾಯಕ, ಓಕಳಿ, ಅಮೀನಪುರದ ಸಂತೆ, ಗ್ರಹಣ, ಹುಲಿಯ ನೆರಳು, ಹಾಸ್ಯ ತರಂಗ, ಅಳಿಯನ ಅವಾಂತರ, ಜೀವನಚಕ್ರ, ಜೀವನ ಸಂಘರ್ಷ, ಲಕ್ಕವ್ವನ ಮಂದಿ, ಸ್ತ್ರೀಲೋಕ ಮತ್ತಿತರ ನಾಟಕಗಳಲ್ಲಿ ಅಭಿನಯಿಸಿದ್ದರು.