ಪತ್ನಿಗೆ ಕೋವಿಡ್ ವಿಷಯ ತಿಳಿದು ಪತಿಗೆ ಹೃದಯಾಘಾತ: ಸಾವಿನಲ್ಲೂ ಒಂದಾದ ದಂಪತಿ
ಚಿಕ್ಕಮಗಳೂರು ನಗರದಲ್ಲಿ ಹೃದಯವಿದ್ರಾವಕ ಘಟನೆ
ಚಿಕ್ಕಮಗಳೂರು, ಮೇ 17: ಪತ್ನಿಗೆ ಕೋವಿಡ್ ಸೋಂಕು ತಗಲಿದೆ ಎಂದು ತಿಳಿದು ಪತಿ ಹೃದಯಾಘಾತದಿಂದ ಮೃತಪಟ್ಟರೆ, ಪತಿ ಸಾವಿನ ಬೆನ್ನಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಪತ್ನಿಯೂ ಕೊನೆಯುಸಿರೆಳೆದ ಹೃದಯವಿದ್ರಾವಕ ಪ್ರಸಂಗವೊಂದು ಚಿಕ್ಕಮಗಳೂರು ನಗರದ ಅರವಿಂದ ನಗರ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ನಿವೃತ್ತ ಎಸ್ಸೈ ಬಸವರಾಜು (68) ಹಾಗು ಅವರ ಪತ್ನಿ ಜಯಮ್ಮ(60) ಮೃತಪಟ್ಟವರು.
ಅನಾರೋಗ್ಯದ ಕಾರಣ ಜಯಮ್ಮರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ವೇಳೆ ಅವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಈ ವಿಚಾರ ತಿಳಿಯುತ್ತಲೇ ಮನೆಯಲ್ಲಿದ್ದ ಬಸವರಾಜು ಅವರಿಗೆ ಹೃದಯಾಘಾತವಾಗಿದ್ದು, ಅವರು ನಿಧನರಾಗಿದ್ದಾರೆ. ಜಯಮ್ಮ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಕೆಲ ಹೊತ್ತಿನ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಂದೆ, ತಾಯಿಯ ಈ ಹಠಾತ್ ಸಾವಿನಿಂದ ಅವರ ಮಕ್ಕಳು ಅಘಾತಕ್ಕೊಳಗಾಗಿದ್ದಾರೆ.
Next Story