ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೋಜುಮಸ್ತಿಗೆ ಮುಂದಾಗಿದ್ದ ಅರಣ್ಯಾಧಿಕಾರಿಗಳು: ಆರೋಪ
ವಾಹನಗಳನ್ನು ತಡೆದ ಗ್ರಾಮಸ್ಥರ ವಿರುದ್ಧವೇ ದೂರು: ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ
ಚಿಕ್ಕಮಗಳೂರು, ಮೇ 22: ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮ ಸಮೀಪದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೋಜುಮಸ್ತಿಗೆ ಹೊರಟ್ಟಿದ್ದಾರೆನ್ನಲಾದ ಅರಣ್ಯಾಧಿಕಾರಿಗಳನ್ನು ತಡೆದು ಪ್ರಶ್ನಿಸಿದ್ದ ಗ್ರಾಮಸ್ಥರ ಮೇಲೆಯೇ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ತಣಗಿಬೈಲು ವೈಡ್ಲೈಫ್ ಅರಣ್ಯಾಧಿಕಾರಿ ನವೀನ್ ಎಂಬವರು ಶುಕ್ರವಾರ, ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಲಿಂಗದಹಳ್ಳಿ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಜನಾರ್ಧನ್, ಮುಬಾರಕ್, ರಂಗಸ್ವಾಮಿ ಹಾಗೂ ನೌಶಾದ್ ಎಂಬ ನಾಲ್ವರು ಗ್ರಾಮಸ್ಥರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಎಫ್ಐರ್ ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ.
ಗುರುವಾರ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದ ಮೂಲಕ ರಾಜ್ಯಮಟ್ಟದ ಹಿರಿಯ ಅರಣ್ಯಾಧಿಕಾರಿಗಳೂ ಸೇರಿದಂತೆ ಜಿಲ್ಲೆಯ ಅರಣ್ಯಾಧಿಕಾರಿಗಳು 10 ಸರಕಾರಿ ವಾಹನಗಳಲ್ಲಿ ಮೋಜುಮಸ್ತಿ ಮಾಡಲು ಹೊರಟ್ಟಿದ್ದರು ಎಂದು ಆರೋಪಿಸಿ ಗ್ರಾಮಸ್ಥರು ವಾಹನಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ ಜಾರಿ ಮಾಡಿರುವ ಲಾಕ್ಡೌನ್ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿ ಗುಂಪಾಗಿ ಮೋಜು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳನ್ನು ಅಲ್ಲಿಂದ ಹಿಂದಕ್ಕೆ ಕಳುಹಿಸಿದ್ದರು. ಅಲ್ಲದೆ ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮೋಜುಮಸ್ತಿಗೆ ಹೊರಟ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.
ಈ ಬೆಳವಣಿಗೆಗಳ ಮಧ್ಯೆ ಲಿಂಗದಹಳ್ಳಿ ಪೊಲೀಸರು ಅಧಿಕಾರಿಗಳನ್ನು ತಡೆದ ಗ್ರಾಮಸ್ಥರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರ ಈ ಕ್ರಮದ ವಿರುದ್ಧ ಸಾರ್ವಜನಿಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮಸ್ಥರ ಮೇಲಿನ ಪ್ರಕರಣ ಕೈಬಿಟ್ಟು, ಲಾಕ್ಡೌನ್ ನಿಯಮಾವಳಿ ಉಲ್ಲಂಘಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಗ್ರಾಮದ 4 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಪೊಲೀಸರ ಕರ್ತವ್ಯ ಲೋಪವಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮೋಜುಮಸ್ತಿಗೆ ಬಂದ ಅಧಿಕಾರಿಗಳನ್ನು ತಡೆದು ವಾಪಾಸ್ ಕಳಿಸಿದ್ದು ತಪ್ಪೇ?, ಸಾರ್ವಜನಿಕರು ಹೀಗೆ ಮಾಡಿದ್ದರೆ ಪೊಲೀಸರು, ಜಿಲ್ಲಾಡಳಿತ ಸುಮ್ಮನಿರುತ್ತಿತ್ತೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.