ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳ ವಿತರಣೆಗೆ ಶಿಕ್ಷಣ ಇಲಾಖೆ ಸೂಚನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 27: 2020-21ನೇ ಸಾಲಿನ ಮಧ್ಯಾಹ್ನ ಉಪಾಹಾರ ಯೋಜನೆಯ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ನವೆಂಬರ್-2020 ರಿಂದ ಎಪ್ರಿಲ್-2021ರ ಆರು ತಿಂಗಳ ಒಟ್ಟು 132 ದಿನದ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ಮತ್ತು ಇತರೆ ಪದಾರ್ಥಗಳನ್ನು ಶಾಲಾ ಮಕ್ಕಳಿಗೆ ಮೇ 31, 2021ರ ಒಳಗಾಗಿ ವಿತರಣೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆಯು, ಪ್ರತಿ ವಿದ್ಯಾರ್ಥಿಗೆ ಆಹಾರ ಧಾನ್ಯಗಳಾದ ಅಕ್ಕಿ ಮತ್ತು ಗೋಧಿಯೊಂದಿಗೆ ಪರಿವರ್ತನಾ ವೆಚ್ಚದ ಬದಲಿಗೆ ತೊಗರಿಬೇಳೆ, ಖಾದ್ಯ ತೈಲ ಮತ್ತು ಉಪ್ಪನ್ನು ಸೂಚಿಸುವ ಪ್ರಮಾಣದಲ್ಲಿ ವಿತರಿಸಬೇಕು. ಹಾಗೂ ಪ್ರತಿ ವಿದ್ಯಾರ್ಥಿಗೆ ವಿತರಣೆ ಮಾಡುವ ಆಹಾರ ಧಾನ್ಯಗಳ ಮತ್ತು ಪ್ರಮಾಣದ ಬಗ್ಗೆ ಸಾರ್ವಜನಿಕರ ಗಮನಕ್ಕಾಗಿ ಶಾಲಾ ಸೂಚನಾ ಫಲಕದಲ್ಲಿ ನಮೂದಿಸಬೇಕು.
ಶಾಲಾ ಮುಖ್ಯಸ್ಥರು, ಎಸ್ಡಿಎಂಸಿ ಸದಸ್ಯರು ಮತ್ತು ತಾಯಂದಿರ ಸಮಿತಿ ಸದಸ್ಯರು ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಆಹಾರ ಧಾನ್ಯಗಳು ಉತ್ತಮ ಗುಣಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾಗೂ ಎನ್ಜಿಒಗಳಿಂದ ಬಿಸಿಯೂಟ ಸರಬರಾಜಾಗುತ್ತಿರುವ ಶಾಲೆಗಳಿಗೆ ಸಂಬಂಧಿಸಿದ ಸ್ವಯಂ ಸೇವಾ ಸಂಸ್ಥೆಗಳೇ ಖುದ್ದಾಗಿ ಮಕ್ಕಳ ಸಂಖ್ಯೆಗನುಗುಣವಾಗಿ ಸದರಿ ಶಾಲೆಗಳಿಗೆ ಆಹಾರ ಧಾನ್ಯಗಳಾದ ಅಕ್ಕಿ ಮತ್ತು ಗೋಧಿ 1ರಿಂದ 8ನೇ ತರಗತಿಯವರೆಗೆ ಎಫ್ಸಿಐನಿಂದ ಹಾಗೂ 9 ಮತ್ತು 10ತರಗತಿಗಳಿಗೆ ಸಾಮಾನ್ಯ ಅಕ್ಕಿಯನ್ನು ಕೆಎಫ್ಸಿಎಸ್ಸಿ ಯಿಂದ ಸರಬರಾಜುಗೊಳಿಸುವುದನ್ನು ಸ್ವೀಕರಿಸಿ ವಿತರಿಸಬೇಕೆಂದು ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ.