ಚಾಮರಾಜನಗರ: ಆಕ್ಸಿಜನ್ ಸೌಲಭ್ಯಯುಕ್ತ ಬಸ್ ಉಚಿತ ಬಸ್ ಸೇವೆಗೆ ಚಾಲನೆ
ಚಾಮರಾಜನಗರ, ಮೇ 28: ಬೆಂಗಳೂರಿನ ಲಯನ್ಸ್ ಕ್ಲಬ್, ಫ್ಯಾಮಿಲಿ ಆ್ಯಂಡ್ ಫ್ರೆಂಡ್ಸ್ ಆಫ್ ಇಂಡಿಯಾ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಹಯೋಗದೊಂದಿಗೆ ಕೋವಿಡ್ ಸೋಂಕಿತರಿಗಾಗಿ ನೀಡಲಾಗುತ್ತಿರುವ ಉಚಿತ ಆಕ್ಸಿಜನ್ ಸೌಲಭ್ಯ ಅಳವಡಿಸಿದ ಬಸ್ ಸೇವೆಗೆ ಇಂದು ಚಾಲನೆ ನೀಡಲಾಯಿತು.
ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಬಸ್ ಸೇವೆಗೆ ಚಾಲನೆ ನೀಡಿದರು.
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಮೇ 2ರಂದು ಆಕ್ಸಿಜನ್ ಕೊರತೆಯಿಂದ 2ಕ್ಕೂ ಅಧಿಕ ಸೋಂಕಿತರ ಮೃತ ಪಟ್ಟ ಘಟನೆಯ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ದಾನಿಗಳ ನೆರವಿನಿಂದ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಂಚಾರಿ ಆಕ್ಸಿಜನ್ ಬಸ್ ವ್ಯವಸ್ಥೆ ಕಲ್ಪಿಸಿದೆ.
ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ರಾಜ್ಯ ವಿಶೇಷ ಚೇತನರ ಆಯೋಗದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ, ಸಮರ್ಥನಂ ಟ್ರಸ್ಟ್ ಅಧ್ಯಕ್ಷ ಹಾಗೂ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಜಿ.ಕೆ. ಮಹಾಂತೇಶ್, ಫ್ಯಾಮಿಲಿ ಆ್ಯಂಡ್ ಫ್ರೆಂಡ್ಸ್ ಆಫ್ ಇಂಡಿಯಾದ ಸಂಸ್ಥಾಪಕರಾದ ಬರ್ಕಿ ಗಾಯತ್ರಿ ಪ್ರಕಾಶ್, ಬಿ.ವಿ. ಚಂದ್ರಪ್ರಕಾಶ್, ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಜಿ.ಎ. ರಮೇಶ್, ಕೆ.ಎನ್.ಶಿವಪ್ರಕಾಶ್ ಉಪಸ್ಥಿತರಿದ್ದರು.