ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿರುವುದು ನಮ್ಮೆಲ್ಲರ ಪುಣ್ಯ: ಸಚಿವ ಈಶ್ವರಪ್ಪ
ಶಿವಮೊಗ್ಗ, ಜೂ.11: ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆಯ ಕೆಲಸವನ್ನು ಮೋದಿ ಮಾಡಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ, ಉಚಿತ ರೇಷನ್ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ಅವರು ಈ ದೇಶದ ಪ್ರಧಾನಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ನವೆಂಬರ್ ತಿಂಗಳವರೆಗೆ ಉಚಿತ ರೇಷನ್ ನೀಡುವುದಾಗಿ ಹೇಳಿದ್ದಾರೆ. ಹೀಗೆ ಉಚಿತ ಲಸಿಕೆ, ಉಚಿತ ರೇಷನ್ ಕೊಡುತ್ತಿರುವ ಮೊದಲ ಪ್ರಧಾನಿ ಇವರು. ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆಯವನ್ನು ಮೋದಿ ಮಾಡಿದ್ದಾರೆ ಎಂದರು.
ವಿರೋಧ ಪಕ್ಷಗಳು ವಿಫಲ: ಲಸಿಕೆ ಪೂರೈಕೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಸರ್ಕಾರ ವಿಫಲವಾಗಿದೆ ಎಂದು ಟೀಕಿಸುವ ಇವರೇ ವಿರೋಧ ಪಕ್ಷದಲ್ಲಿರಲು ವಿಫಲರಾಗಿದ್ದಾರೆ. ಮೊದಲು ಲಸಿಕೆಯನ್ನು ಮೋದಿ ವ್ಯಾಕ್ಸಿನ್, ಬಿಜೆಪಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಈಗ ಎಲ್ಲರಿಗೂ ಲಸಿಕೆ ಸಿಗಲಿದೆ. ಸಿದ್ದರಾಮಯ್ಯರಿಗೆ ಬುದ್ಧಿ ಇಲ್ಲ ಎಂದು ಇದೇ ಕಾರಣಕ್ಕೆ ಹೇಳುತ್ತಿದ್ದೇನೆ ಎಂದು ಅವರು ಟೀಕಿಸಿದರು.