ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಸಚಿವರ ಎದುರಲ್ಲೇ ಪಿಡಿಒ ವಿರುದ್ಧ ಮಹಿಳೆಯ ಆಕ್ರೋಶ
ಶಿವಮೊಗ್ಗ, ಜೂ.14: ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಸಚಿವರ ಮುಂದೆಯೇ ಪಿಡಿಓಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹಸೂಡಿ ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆ ಸಭೆ ನಡೆಸಿದರು.
ಈ ವೇಳೆ ಕೊರೋನ ಸೋಂಕು ನಿಯಂತ್ರಣಕ್ಕೆ ಮನೆ ಮನೆಗೆ ತೆರಳಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ ಎಂದು ಅಲ್ಲಿನ ಪಿಡಿಒ ವಿವರಣೆ ನೀಡುತ್ತಿದ್ದರು. ಈ ಸಂಬಂಧ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಮಹಿಳೆ ಮೀನಮ್ಮ, ಸಚಿವರ ಎದುರು ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಸ್ಯಾನಿಟೈಸೇಷನ್ ಮಾಡದೆ ಮಾಡಿದ್ದೀವಿ ಎಂದು ಹೇಳುತ್ತಿದ್ದೀರಾ, ಬರೀ ಫೋಟೊ ಹೊಡೆದು ಹಾಕಿದರೆ ಸಾಕೆ. ಎಲ್ಲಿ ಸ್ಯಾನಿಟೈಸೇಷನ್ ಮಾಡಿದ್ದೀರಾ ಹೇಳಿ, ಸುಮ್ಮನೆ ಸುಳ್ಳು ಹೇಳುತ್ತೀರಾ ಅಷ್ಟೇ ಎಂದು ಸಚಿವರ ಎದುರೇ ಪಿಡಿಒರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನ ಕೇಳುತ್ತಲೇ ಸಚಿವ ಈಶ್ವರಪ್ಪ ಆಯ್ತು ಸುಮ್ಮನಿರಮ್ಮ ನಾನು ಕೇಳುತ್ತೇನೆ, ನೀನೇ ಮಾತನಾಡಿದರೆ ಹೇಗೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದಾರೆ. ಆದರೂ ಮಹಿಳೆ ಪಿಡಿಒರನ್ನು ಬಿಡದೆ ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ಸಚಿವ ಈಶ್ವರಪ್ಪ ಮಹಿಳೆಯನ್ನು ಸಮಾಧಾನ ಮಾಡಿದ್ದಾರೆ.