ತನ್ನ ಮಗು ಬಿಸಿ ನೀರು ಬಿದ್ದು ಮೃತಪಟ್ಟರೂ ಬೇರೊಬ್ಬರ ಕಷ್ಟಕ್ಕೆ ನೆರವಾದ ಆ್ಯಂಬುಲೆನ್ಸ್ ಚಾಲಕ ಮುಬಾರಕ್
ಮೈಸೂರು,ಜೂ.15: ಬಿಸಿ ನೀರು ಬಿದ್ದು ತನ್ನ ಮಗು ಸಾವನ್ನಪ್ಪಿದ್ದರೂ ಬೇರೊಬ್ಬರ ಸಂಕಷ್ಟದಲ್ಲಿ ಭಾಗಿಯಾಗುವ ಮೂಲಕ ಆ್ಯಂಬುಲೆನ್ಸ್ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದು, ಸಹಾಯವಾಣಿ ಕೇಂದ್ರದಿಂದ ಕರೆ ಬಂದ ಹಿನ್ನಲೆಯಲ್ಲಿ ರೋಗಿಯೊಬ್ಬರನ್ನು ಚಾಮರಾಜನಗರಕ್ಕೆ ಬಿಟ್ಟು ಬಂದಿದ್ದಾರೆ.
ನಗರದ ಸಿದ್ದೀಕ್ ನಗರ ನಿವಾಸಿ, ಸಹಾಯವಾಣಿ ಕೇಂದ್ರದ ಆ್ಯಂಬುಲೆನ್ಸ್ ಚಾಲಕ ಮುಬಾರಕ್ ಅವರ 2 ವರ್ಷದ ಪುತ್ರನಿಗೆ ಆಕಸ್ಮಿಕವಾಗಿ ಬಿಸಿ ನೀರು ಬಿದ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ತಡ ರಾತ್ರಿ ಮೃತಪಟ್ಟಿದೆ.
ಮಗನ ಸಾವಿನ ಸುದ್ದಿ ತಿಳಿದರೂ ಸಹಾಯವಾಣಿ ಕೇಂದ್ರದಿಂದ ಕರೆ ಬಂದಾಗ ಮೈಸೂರಿನ ಸರಸ್ವತಿಪುರಂನಲ್ಲಿರುವ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಸಾಗಿಸಿ ಮುಬಾರಕ್ ಮಾನವೀಯತೆ ಮೆರೆದಿದ್ದಾರೆ.
ಸಹಾಯವಾಣಿ ಕೇಂದ್ರಕ್ಕೆ ಬಂದು ತಮ್ಮ ಮಗು ಮೃತಪಟ್ಟಿರುವ ವಿಷಯವನ್ನು ಹೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಆ್ಯಂಬುಲೆನ್ಸ್ ಚಾಲಕನ ಕರ್ತವ್ಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.