ಸಕಲೇಶಪುರ: ಎರಡೂವರೆ ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ
ಸಕಲೇಶಪುರ, ಜೂ.19: ಮಹಿಳೆಯೊಬ್ಬರು ತನ್ನ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಮೋಹನ್ ಎಂಬವರ ಪತ್ನಿ ಪ್ರಜ್ವಲ(26) ಹಾಗೂ ಎರಡೂವರೆ ವರ್ಷದ ಪುತ್ರಿ ಸಾಧ್ವಿ ಸಾವನ್ನಪ್ಪಿದವರು.
ತನ್ನ ಪತಿ ಮೋಹನ್ ಮನೆಯಿಂದ ಹೊರ ಹೋದ ನಂತರ ಪ್ರಜ್ವಲ ಮನೆಯ ಫ್ಯಾನಿಗೆ ಮಗುವನ್ನು ಸೀರೆಯಿಂದ ನೇಣು ಹಾಕಿ, ಮತ್ತೊಂದು ಸೀರೆಯಿಂದ ತಾನು ಅದೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತಿ ಮೋಹನ್ ಮೊಬೈಲ್ಗೆ ಕರೆ ಮಾಡಿದಾಗ ಪ್ರಜ್ವಲ ಕರೆ ಸ್ವೀಕರಿಸದ ಕಾರಣ ನೆರೆ ಮನೆಗೆ ಕರೆ ಮಾಡಿ ಮನೆ ಕಡೆ ಗಮನಿಸುವಂತೆ ತಿಳಿಸಿದ್ದು, ಈ ವೇಳೆ ನೆರೆಮನೆಯವರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ಪ್ರಜ್ವಲ ಹಾಗೂ ಮೋಹನ್ಗೆ ಇದು ಎರಡನೇ ಮದುವೆಯಾಗಿದ್ದು, ಪಜ್ವಲ ಅವರ ಮೊದಲ ಪತಿ ಕಳೆದ ಎರಡು ವರ್ಷದ ಹಿಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಮೋಹನ್ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಹೆರಿಗೆ ವೇಳೆ ಮೃತಪಟ್ಟಿದ್ದರು. ಇದರಿಂದಾಗಿ ಹಿರಿಯರು ಸೇರಿ ಕಳೆದ ಬುಧವಾರ ಇಬ್ಬರಿಗೂ ಪಜ್ವಲ ತವರು ಮನೆಯಾದ ಹಡ್ಲಹಳ್ಳಿ ಗ್ರಾಮದಲ್ಲಿ ಮದುವೆ ಮಾಡಿದ್ದು, ತನ್ನ ಪುತ್ರಿಯನ್ನು ಕರೆದುಕೊಂಡು ಶುಕ್ರವಾರ ಪ್ರಜ್ವಲ ಗಂಡನ ಮನೆಗೆ ಬಂದಿದ್ದರು.
ಮೃತ ಮಹಿಳೆಯು ತನಗೆ ಮರು ಮದುವೆ ಬೇಡ ಎನ್ನತ್ತಿದ್ದರು. ಭವಿಷ್ಯದ ಬಗ್ಗೆ ತಿಳಿ ಹೇಳಿ ಹಿರಿಯರು ಮದುವೆ ಮಾಡಿಸಿದ್ದರು. ಆದರೆ ಮರು ಮದುವೆಯಿಂದ ನೊಂದು ಪ್ರಜ್ವಲ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಕ್ರಾಫರ್ಡ್ ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.