'ಸುಧರ್ಮ' ಸಂಸ್ಕೃತ ಪತ್ರಿಕೆಯ ಸಂಪಾದಕ, ಪದ್ಮಶ್ರೀ ಪುರಸ್ಕೃತ ಸಂಪತ್ ಕುಮಾರ್ ಅಯ್ಯಂಗಾರ್ ನಿಧನ
ಮೈಸೂರು, ಜೂ.30: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, 'ಸುಧರ್ಮ' ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ (64) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
2019ರಲ್ಲಿ ಸಂಪತ್ ಕುಮಾರ್ ಪದ್ಮಶ್ರೀ ಪುರಸ್ಕೃತರಾಗಿದ್ದರು. ಸುಧರ್ಮ ವಿಶ್ವದ ಏಕೈಕ ಸಂಸ್ಕೃತ ದೈನಿಕವಾಗಿದ್ದು, ಕಳೆದ ನಾಲ್ಕು ದಶಕಗಳಿಂದ 'ಸುಧರ್ಮ'ವನ್ನು ಸಂಪತ್ ಕುಮಾರ್ ಮುನ್ನಡೆಸಿದ್ದರು. ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದ ಸಂಪತ್ ಕುಮಾರ್ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿತ್ತಾದರೂ ಇನ್ನೂ ಪ್ರಶಸ್ತಿ ಸ್ವೀಕರಿಸಿರಲಿಲ್ಲ. ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ನಿಧನರಾಗಿದ್ದಾರೆ.
ಬುಧವಾರ ಮಧ್ಯಾಹ್ನ ಪತ್ರಿಕೆಯ ಕೆಲಸದಲ್ಲಿರುವಾಗಲೇ ತೀವ್ರ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಸಂಪತ್ ಕುಮಾರ್ ಅಯ್ಯಂಗಾರ್ ನಿಧನರಾಗಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಅಗ್ರಹಾರದಲ್ಲಿರುವ ಸಂಪತ್ ಕುಮಾರ್ ಅಯ್ಯಂಗಾರ್ ಅವರ ಮನೆಗೆ ತೆರಳಿ ಮೃತರ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.