ಮುಖ್ಯಮಂತ್ರಿ ದೆಹಲಿ ಪ್ರವಾಸ: ರಾಜಕೀಯ ಉದ್ದೇಶ ಇಲ್ಲ ಎಂದ ಸಚಿವ ಆರ್.ಅಶೋಕ್
ಬೆಂಗಳೂರು, ಜು.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊಸದಿಲ್ಲಿಗೆ ತೆರಳಿದ್ದಾರೆ. ಆದರೆ, ರಾಜಕೀಯ ಕಾರಣದ ಭೇಟಿ ಇದಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರದ ಜೊತೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸದಿಲ್ಲಿಗೆ ತೆರಳಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಿಎಸ್ ವೈ ಭೇಟಿ ಮಾಡಲಿದ್ದಾರೆ. ಇದು ಕೇವಲ ಅಭಿವೃದ್ಧಿ ವಿಚಾರಕ್ಕೆ ಮಾತ್ರ ಸೀಮಿತವಾದ ಪ್ರವಾಸವಾಗಿದ್ದು, ಯಾವುದೇ ರಾಜಕೀಯ ಭೇಟಿ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಕೋವಿಡ್ ಸಂಬಂಧ ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಆತಂಕದ ವಾತಾವರಣ ಇದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ನೆರೆ ರಾಜ್ಯ ಕರ್ನಾಟಕವೂ ಗಮನ ಕೊಡಬೇಕು ಎಂದ ಅವರು, ಯಾವುದೇ ರಾಜ್ಯದಲ್ಲಿ ನಿರಂತರವಾಗಿ ಕೋವಿಡ್ ಹರಡುವಿಕೆ ಪ್ರಮಾಣ ಒಂದೇ ರೀತಿ ಇದ್ದರೆ ವೈರಸ್ ಬದಲಾಗುತ್ತಾ ಹೋಗಲಿದೆ. ಹಾಗಾಗಿ ಅದು ಕಡಿಮೆ ಆಗಬೇಕು ಎಂದರು.