ಪರಮೇಶ್ವರ್ ಸೋಲಿಸಿದ ಸಿದ್ದರಾಮಯ್ಯ: ಬಿಜೆಪಿ ಟೀಕೆ
ಬೆಂಗಳೂರು, ಜು.23: ದಲಿತನೊಬ್ಬ ಸಿಎಂ ಆಗಬಾರದು ಎಂದು ಪರಮೇಶ್ವರ್ ಅವರನ್ನು ಸೋಲಿಸಿದ ಸಿದ್ದರಾಮಯ್ಯ, ಈಗ ದಲಿತ ಪ್ರೇಮ ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ‘ದಲಿತ ಮುಖ್ಯಮಂತ್ರಿ’ ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು ‘ಕುಟುಂಬ ರಾಜಕಾರಣ’ದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರೇ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, ‘ನಾನೇ ಮುಂದಿನ ಸಿಎಂ’ ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ? ಎಂದು ಬಿಜೆಪಿ ಹೇಳಿದೆ.
ರಾಜ್ಯದಲ್ಲಿ ದಲಿತ ಸಿಎಂ ವಾದವನ್ನು ಹತ್ತಿಕ್ಕಿದ್ದೇ ಸಿದ್ದರಾಮಯ್ಯ. ಖರ್ಗೆ ಸೋಲಿನಲ್ಲೂ ಸಿದ್ದರಾಮಯ್ಯ ಕರಿನೆರಳಿತ್ತು. ಸಿಎಂ ಆಗಿದ್ದಾಗ ದಲಿತ ನಾಯಕ ಪರಮೇಶ್ವರರಿಗೆ ಕಣ್ಣೀರು ಹಾಕಿಸಿದ್ದ ಸಿದ್ದರಾಮಯ್ಯ ಈಗ ಬೇರೆಯವರಿಗೆ ಉಪದೇಶ ನೀಡುತ್ತಿದ್ದಾರೆ. ಅಧಿಕಾರ ಇದ್ದಾಗಲೆಲ್ಲಾ ದಲಿತರಿಗೆ ಮಾಡಿದ್ದು ಅನ್ಯಾಯವೇ ಎಂದು ಬಿಜೆಪಿ ದೂರಿದೆ.