ನನ್ನನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ: ಕೆ.ಎಸ್. ಈಶ್ವರಪ್ಪ
ಬೆಂಗಳೂರು, ಜು. 28: `ನನ್ನನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ರಾಜ್ಯದ ಕುರುಬ ಸಮುದಾಯ ಸೇರಿದಂತೆ ವಿವಿಧ ಮಠಾಧಿಪತಿಗಳು ಒತ್ತಾಯಿಸಿದ್ದಾರೆ' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದರು.
ಬುಧವಾರ ರಾಜಭವನದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಅವರು, ಇಂದು ನನ್ನ ನಿವಾಸಕ್ಕೆ ಆಶೀರ್ವಾದ ಮಾಡಲು ಸ್ವಾಮೀಜಿಗಳು ಬಂದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿತ್ತಾರೆಂದು ಗೊತ್ತಾದಾಗ ಹೊಸ ಮುಖ್ಯಮಂತ್ರಿ ಬಗ್ಗೆ ವಿಷಯ ಚರ್ಚೆ ಆರಂಭವಾಯಿತು. ಯಡಿಯೂರಪ್ಪ ಬದಲಾದರೆ ನನ್ನನ್ನು ಮುಖ್ಯಮಂತ್ರಿ ಮಾಡಬೇಕು' ಎಂದು ಆಗ್ರಹಿಸಿದ್ದರು.
`ಈಗಾಗಲೇ ಮುಖ್ಯಮಂತ್ರಿ ಆಯ್ಕೆ ಮಾಡಿದ್ದು, ಉಪಮುಖ್ಯಮಂತ್ರಿಯನ್ನಾಗಿಯಾದರೂ ಮಾಡಲಿ ಎಂದು ಸ್ವಾಮೀಜಿಗಳು ಬಯಸಿದ್ದರು. ಹೀಗಾಗಿ ನನ್ನ ನಿವಾಸಕ್ಕೆ ಆಗಮಿಸಿದ ಮಠಾಧೀಶರು ಆರ್ಶೀವಾದ ಮಾಡಿದ್ದಾರೆ. ಪಕ್ಷದ ವರಿಷ್ಟರು ಈ ಕುರಿತು ನಿರ್ಧಾರ ಮಾಡಲಿದ್ದಾರೆ' ಎಂದು ಈಶ್ವರಪ್ಪ ತಿಳಿಸಿದರು.
Next Story