ನನ್ನ ಶಕ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಧಾರೆಯೆರೆಯುವೆ: ಮಧು ಬಂಗಾರಪ್ಪ
ಹುಬ್ಬಳ್ಳಿ, ಜು. 30: `ನಾನು ನನ್ನ ತಂದೆಯ ರೀತಿಯಲ್ಲಿಯೇ ಜಾತಿಯನ್ನು ಮೀರಿ ರಾಜಕಾರಣ ಮಾಡುತ್ತೇನೆ. ಜೊತೆಗೆ ನನ್ನ ಶಕ್ತಿಯನ್ನೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಧಾರೆಯೆರೆಯುವ ಮೂಲಕ ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ಉಳಿಸುವಂತಹ ಕೆಲಸ ಮಾಡುತ್ತೇನೆ' ಎಂದು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹುಬ್ಬಳ್ಳಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, `ನನಗೆ ಇದ್ದದ್ದು ಒಂದೇ ಪಕ್ಷ. ಅದು ಬಂಗಾರಪ್ಪನವರ ಪಕ್ಷ. ಅವರ ನೆರಳಿನಲ್ಲಿಯೇ ಬೆಳೆದೆ. ನನ್ನ ಮೇಲೆ ನಂಬಿಕೆ ಇಟ್ಟು, ಕಾಂಗ್ರೆಸ್ಗೆ ಬರ ಮಾಡಿಕೊಂಡಿರುವವರ ವಿಶ್ವಾಸ ಉಳಿಸುವಂತಹ ಕೆಲಸವನ್ನು ಮಾಡುತ್ತೇನೆ' ಎಂದು ಭರವಸೆ ವ್ಯಕ್ತಪಡಿಸಿದರು.
`ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಬದಲಿಗೆ ನನ್ನ ತಂದೆ ಹೆಸರಿಗಿಂತ ನನಗೆ ದೊಡ್ಡ ಹುದ್ದೆ ಇಲ್ಲ. ಯಾವ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿರ್ವಹಿಸುತ್ತೇನೆ. ಬೇರೆ ಪಕ್ಷಗಳಲ್ಲಿರುವ ತಂದೆಯ ಅನುಯಾಯಿಗಳನ್ನು ಕಾಂಗ್ರೆಸ್ಗೆ ಕರೆತರಲು ಶ್ರಮಿಸುವೆ. ಜಾತಿ ತಾಯಿ ಇದ್ದಂತೆ. ಇತರ ತಾಯಂದಿರಿಗೂ ಗೌರವ ಕೊಟ್ಟಾಗ, ನನ್ನ ತಾಯಿ ಗೌರವ ಹೆಚ್ಚಾಗುತ್ತದೆ ಎಂದು ತಂದೆ ಹೇಳುತ್ತಿದ್ದರು. ಸಮುದಾಯದ ದನಿಯನ್ನು ಮುಟ್ಟಿಸಬೇಕಾದವರಿಗೆ ಮುಟ್ಟಿಸುವೆ' ಎಂದು ಅವರು ತಿಳಿಸಿದರು.