ಸಂಪುಟ ರಚನೆ : ಬಿಜೆಪಿ ಹೈಕಮಾಂಡ್ ಕೃಷ್ಣನ ತಂತ್ರಗಾರಿಕೆ ಅನುಸರಿಸುತ್ತಿದೆ; ಕೆ.ಎಸ್ ಈಶ್ವರಪ್ಪ
"ವಲಸೆ ಬಂದ ಶಾಸಕರಿಗೆ ಈ ಬಾರಿ ಅವಕಾಶ ಸಿಗದೆ ಇರಬಹುದು"
ಶಿವಮೊಗ್ಗ,ಆ.2: ನೂತನ ಸಚಿವ ಸಂಪುಟ ರಚನೆ ವೇಳೆ ಬಿಜೆಪಿ ಹೈಕಮಾಂಡ್ ಕೃಷ್ಣನ ತಂತ್ರಗಾರಿಕೆ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಪುಟದಲ್ಲಿ ಯುವಕರು ಹಾಗೂ ಹಳಬರಿಗೆ ಸಮಾನ ಅವಕಾಶ ಸಿಗುವ ಸಾಧ್ಯತೆ ಇದೆ. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷದ ವರಿಷ್ಠರು ಕೃಷ್ಣನ ತಂತ್ರಗಾರಿಕೆ ಮಾಡುತ್ತಿದ್ದಾರೆ. ಎರಡು ವರ್ಷಗಳ ನಂತರ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ದೊರಕಿಸುವ ಗುರಿ ಇದೆ. ಯಾವುದೇ ಲಾಬಿ, ಒತ್ತಡಕ್ಕೆ ಮಣೆ ಹಾಕುವುದಿಲ್ಲ ಎಂದರು.
ಎರಡು ದಿನಗಳಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ಸಂಪುಟದಲ್ಲಿ ಯಾರು ಇರುತ್ತಾರೆ. ಇರುವುದಿಲ್ಲ ಎನ್ನುವುದು ಭಗವಂತ ಹಾಗೂ ಹೈಕಮಾಂಡ್ಗೆ ಗೊತ್ತಿದೆ. ಬಿಜೆಪಿಗೆ ವಲಸೆ ಬಂದು ಸರ್ಕಾರ ರಚನೆಗೆ ಕಾರಣರಾದ ಕೆಲವು ಶಾಸಕರಿಗೆ ಈ ಬಾರಿ ಅವಕಾಶ ಸಿಗದೆ ಇರಬಹುದು ಎಂದು ಹೇಳಿದರು.
ಬೊಮ್ಮಾಯಿ ಸರ್ಕಾರದ ಭವಿಷ್ಯ ಕುರಿತು ಸ್ವಾಮೀಜಿಯೊಬ್ಬರ ಭವಿಷ್ಯವಾಣಿ ಸತ್ಯ ಆಗಬಹುದು. ಸುಳ್ಳೂ ಆಗಬಹುದು. ಮುಖ್ಯಮಂತ್ರಿ ಯಡಿಯೂರಪ್ಪ ಆಶೀರ್ವಾದ ಪಡೆದಂತೆ ದೇವೇಗೌಡರ ಮನೆಗೂ ಭೇಟಿ ನೀಡಿದ್ದಾರೆ. ಭೇಟಿಯ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಸಮರ್ಥಿಸಿಕೊಂಡರು.