ವಿನಯ್ ಕುಲಕರ್ಣಿ ವಿರುದ್ಧದ ಸಾಕ್ಷಿ ನಾಶ ಪ್ರಕರಣದ ವಿಚಾರಣೆ ನಡೆಯಬೇಕಿದೆ: ವಕೀಲ ಆನಂದ ಕೊಳ್ಳಿ
ಜಿಪಂ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣ
ವಿನಯ್ ಕುಲಕರ್ಣಿ
ಧಾರವಾಡ, ಆ.12: ಧಾರವಾಡ ಜಿಪಂ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಲಭಿಸಿದೆ. ಆದರೆ ಸಾಕ್ಷಿನಾಶ ಸಂಬಂಧ ಇರುವ ಕೇಸ್ನ ವಿಚಾರಣೆ ನಡೆಯಬೇಕಿದೆ ಎಂದು ವಿನಯ್ ಪರ ವಕೀಲ ಆನಂದ ಕೊಳ್ಳಿ ಮಾಹಿತಿ ನೀಡಿದ್ದಾರೆ.
ಗುರುವಾರ ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಷ್ಟರಲ್ಲೇ ಸಾಕ್ಷಿನಾಶ ಪ್ರಕರಣದ ಜಾಮೀನು ಅರ್ಜಿ ಸಲ್ಲಿಸಲಿದ್ದೇವೆ. ಸುಪ್ರೀಂ ಆದೇಶ ಹಿನ್ನೆಲೆಯಾಗಿಟ್ಟುಕೊಂಡು ಈ ಅರ್ಜಿ ಸಲ್ಲಿಸುತ್ತೇವೆ. ವಿನಯ್ ಕುಲಕರ್ಣಿ ಬೆಂಗಳೂರಿನಲ್ಲೇ ಇರುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ, ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅವರಿಗೆ ನಿಬರ್ಂಧ ಇದೆ.
ವಿಚಾರಣೆ ಮುಗಿಯುವವರೆಗೂ ಧಾರವಾಡಕ್ಕೆ ಬರುವಂತೆ ಇಲ್ಲ. ಧಾರವಾಡಕ್ಕೆ ಬರಬೇಕೆಂದರೆ ಸುಪ್ರೀಂ ಅನುಮತಿ ಪಡೆಯಬೇಕು. ಅವಶ್ಯಕ ಕಾರಣ ಒದಗಿಸಿ ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದರು.
ಸುಪ್ರೀಂಗೆ ಜಾಮೀನು ಅರ್ಜಿ ಸಲ್ಲಿಸಿದ್ದೆವು. ಜಾಮೀನಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. ಕಾನೂನು ಪ್ರಕಾರ ಸಿಬಿಐ ನಡೆ ತಪ್ಪು ಎಂದು ನಾವು ವಾದಿಸಿದೆವು. ನಮ್ಮ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು. ಹೈಕೋರ್ಟ್ನಲ್ಲಿನ ವಿಚಾರಣೆಯನ್ನು ಎರಡು ತಿಂಗಳಲ್ಲಿ ಮುಗಿಸಲು ಸುಪ್ರೀಂ ಸೂಚಿಸಿದೆ ಎಂದು ವಕೀಲ ಕೊಳ್ಳಿ ಅವರು ತಿಳಿಸಿದರು. ರಾಜ್ಯ ಸರಕಾರದಿಂದ ಸಿಬಿಐ ತನಿಖೆ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೊಳ್ಳಿ, ರಾಜ್ಯ ಸರಕಾರ ಮೂರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅದರಲ್ಲಿ ಒಂದು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆಗ ಯೋಗೀಶ್ ಗೌಡರ ಅಣ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅವರ ಅರ್ಜಿಯನ್ನೂ ತಿರಸ್ಕರಿಸಿತ್ತು.
ಆದರೂ ಸರಕಾರ ಮತ್ತೆ ಪ್ರಕರಣವನ್ನು ಸಿಬಿಐಗೆ ನೀಡಿತು. ಇದನ್ನೇ ನಾವು ಸುಪ್ರೀಂ ಕೋರ್ಟ್ನಲ್ಲಿ ಚಾಲೆಂಜ್ ಮಾಡಿದೆವು. ಸುಪ್ರೀಂ ಕೋರ್ಟ್ ಸಾಕ್ಷಿನಾಶದ ಪ್ರಕರಣವನ್ನು ಹೈಕೋರ್ಟ್ ನಿರ್ಧಾರಕ್ಕೆ ಬಿಟ್ಟಿದೆ ಎಂದು ತಿಳಿಸಿದರು.