ಯಾದಗಿರಿ: ‘ಜನಾಶೀರ್ವಾದ ಯಾತ್ರೆ’ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ
ನಾಲ್ವರ ಬಂಧನ
ಯಾದಗಿರಿ: ‘ಜನಾಶೀರ್ವಾದ ಯಾತ್ರೆ’ ಆಗಮಿಸಿದ ನೂತನ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಿರುವ ಘಟನೆ ನಡೆದಿದ್ದು, ಇದೀಗ ನಾಲ್ವರನ್ನು ಬಂಧಿಸಲಾಗಿದೆ.
ನಗರದ ಹೊರಭಾಗದ ಯರಗೋಳ ಗ್ರಾಮದಲ್ಲಿ ಇಂದು ‘ಜನಾಶೀರ್ವಾದ ಯಾತ್ರೆ’ಗೆ ಆಗಮಿಸಿದ ಕೇಂದ್ರ ಇಂಧನ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲು ಸ್ಥಳೀಯ ಕಾರ್ಯಕರ್ತರು ಸಿದ್ಧತೆ ನಡೆಸಿದ್ದರು. ಈ ವೇಳೆ ಕೆಲವರು ಬಂದೂಕಿನಲ್ಲಿ ಮದ್ದು ತುಂಬಿಸಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಚಿವರನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ.
ಮೂರು ನಾಡ ಬಂದುಕುಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಮಾಡಲಾಗಿದ್ದು, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಂದ ನಾಡ ಬಂದುಕು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
Next Story