ಮೈಸೂರು: ಮೇಯರ್ ಚುನಾವಣೆಯ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ; ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್
ಶಾಸಕ ತನ್ವೀರ್ ಸೇಠ್
ಮೈಸೂರು,ಆ.25: ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಂಟಾದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ಮಾಧ್ಯಮದವರೊಂದಿಗತೆ ಮಾತನಾಡಿದ ಅವರು, ಕಳೆದ ಬಾರಿ ಪಕ್ಷ ಹಾಗೂ ನಗರದ ಹಿತಕ್ಕಾಗಿ ನಾನು ರಿಸ್ಕ್ ತೆಗೆದುಕೊಂಡಿದ್ದೆ. ಈ ಬಾರಿ ಕೇವಲ ಪಕ್ಷದ ಹಿತ ಮುಖ್ಯ ಆಗಿತ್ತು. ಈಗಾಗಿ ವರಿಷ್ಠರು ಹೇಳಿದಷ್ಟು ಮಾಡಿದ್ದೇನೆ. ಅಲ್ಲದೆ ಕೊನೆ ಗಳಿಗೆಯಲ್ಲಿ ನಮಗೆ ವರಿಷ್ಟರಿಂದ ಸಂದೇಶ ಬರೋದು ಲೇಟ್ ಆಯ್ತು. ಸ್ಥಳಿಯವಾಗಿ ಹಲವು ಕಾರಣಗಳಿಂದ ನಮಗೆ ಅಧಿಕಾರ ತಪ್ಪಿದೆ. ಪ್ರಯತ್ನದ ನಡುವೆಯೂ ಆದ ಸೋಲು, ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದಿದ್ದಾರೆ.
ಇಬ್ಬರೂ ಮೈತ್ರಿಗೆ ಪಟ್ಟು ಹಿಡಿದಿದ್ದರಿಂದ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ನಿನ್ನೆ ರಾತ್ರಿಯೂ ಸಾ.ರಾ ಮಹೇಶ್ ಜೊತೆ ಮಾತುಕತೆ ನಡೆಸಿದ್ದೆ. ನಮ್ಮ ಉಪಮೇಯರ್ ರಾಜಿನಾಮೆ ಕೊಡಿಸಿ ನಿಮಗೆ ಕೊಡ್ತೀವಿ ಅಂತಲೂ ಹೇಳಿದ್ದೆವು. ಆದರೆ ಜೆಡಿಎಸ್ ನವರು ಮಾತು ಕೇಳಲಿಲ್ಲ. ಬಿಜೆಪಿಯಲ್ಲಿ ಹೆಚ್ಚು ಸದಸ್ಯರು ಇರುವುದರಿಂದ ಅವರು ಅಧಿಕಾರ ಹಿಡಿದಿದ್ದಾರೆ ಎಂದು ಹೇಳಿದರು.