ಸೆ.13ರಿಂದ ವಿಧಾನಸಭೆ ಅಧಿವೇಶನ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
'ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ' ► 'ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ಕ್ರಮ'
ಬೆಂಗಳೂರು, ಸೆ. 8: `ವಿಧಾನಸಭೆ ಅಧಿವೇಶನವು ಸೆ.13ರಿಂದ ಆರಂಭವಾಗಲಿದ್ದು, ಒಟ್ಟು 10 ದಿನಗಳ ಕಾಲ ನಡೆಯಲಿದೆ. ಈ ಬಾರಿ ಸಾರ್ವಜನಿಕರಿಗೆ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಮೊದಲ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ನಡೆದಿತ್ತು. ಕೋವಿಡ್ ಹಿನ್ನೆಲೆಯಲ್ಲಿ 6 ತಿಂಗಳ ನಂತರ ಅಧಿವೇಶನ ನಡೆಯುತ್ತಿದ್ದು, ಸಚಿವರು ಹಾಗೂ ಸದಸ್ಯರು ಗೈರು ಹಾಜರಾಗದೆ ಎಲ್ಲ ಶಾಸಕರು ಪೂರ್ಣ ಪ್ರಮಾಣದಲ್ಲಿ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಚಿವರು ರಜೆ ಕೋರಬಾರದೆಂದು ಈಗಾಗಲೇ ಪತ್ರ ಬರೆದು ಸೂಚಿಸಲಾಗಿದೆ' ಎಂದು ತಿಳಿಸಿದರು.
`ಸದನದಲ್ಲಿ `ಕೋರಂ'ಗೆ ಗಂಟೆ ಬಾರಿಸುವುದು, ಪ್ರಶ್ನೆ ಕೇಳುವ ಸದಸ್ಯರಿಲ್ಲದಿರುವುದು, ಉತ್ತರ ಹೇಳಲು ಸಚಿವರಿಲ್ಲ ಎನ್ನುವಂತಾಗಬಾರದು. ವಿಳಂಬವಿಲ್ಲದೆ ಕಾಲ-ಕಾಲಕ್ಕೆ ಉತ್ತರ ಬರಬೇಕು. ಈ ಬಗ್ಗೆ ಸರಕಾರಕ್ಕೆ ತಿಳಿಸಲಾಗಿದೆ' ಎಂದ ಸ್ಪೀಕರ್ ಕಾಗೇರಿ, `ಈ ಬಾರಿ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿದ್ದು, ಶಾಲಾ ಮಕ್ಕಳ ಪ್ರವಾಸ ಬೇಡ. ಕೋವಿಡ್ ಮಾರ್ಗಸೂಚಿಯನ್ವಯ ಸದಸ್ಯರ ನಡುವೆ ಅಂತರ ಮಾಸ್ಕ್, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.
`ಸಾಮಾನ್ಯ ಜನರ ನಿರೀಕ್ಷೆಗೆ ತಕ್ಕಂತೆ ಸದನ ಕಲಾಪ ನಡೆಸುವುದು ನನ್ನ ಜವಾಬ್ದಾರಿಯಾಗಿದೆ. ಅಧಿವೇಶನದ ಕೊನೆ ದಿನವಾದ ಸೆ.24ರಂದು `ಸಂಸದೀಯ ಮೌಲ್ಯಗಳ ಕುರಿತು' ಜಂಟಿ ಅಧಿವೇಶನ ನಡೆಸಲಾಗುವುದು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆಗಮಿಸಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನದಲ್ಲಿ ನಾಲ್ಕು ಅಧ್ಯಾದೇಶಗಳನ್ನು, 10 ವಿಧೇಯಕಗಳು ಮಂಡನೆಯಾಗಿ ಅಂಗೀಕಾರಕ್ಕೆ ಬಾಕಿ ಇರುವ ನಾಲ್ಕು ವಿಧೇಯಕಗಳು ಸೇರಿದಂತೆ 18 ವಿಧೇಯಕಗಳು ಪ್ರಸ್ತಾಪವಾಗಲಿದೆ' ಎಂದು ವಿವರಿಸಿದರು.
ಅತ್ಯುತ್ತಮ ಶಾಸಕ ಪ್ರಶಸ್ತಿ: `ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಹಾಗೂ ದೃಶ್ಯ ಅಥವಾ ಧ್ವನಿ ಮುದ್ರಕರ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ ಸೇರಿದಂತೆ 10 ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ. ಈ ಅಧಿವೇಶನದ ಕೊನೆಯ ದಿನ `ಅತ್ಯುತ್ತಮ ಶಾಸಕ ಪ್ರಶಸ್ತಿ'ಯನ್ನು ಒಬ್ಬರಿಗೆ ನೀಡಲು ಈಗಾಗಲೇ ಸಿದ್ಧತೆ ಮಾಡಲಾಗಿದೆ. ಸದನದ ನಿಯಮಾವಳಿಗಳ ತಿದ್ದುಪಡಿಗಳಿಗೆ ಅಂತಿಮ ರೂಪ ಈಗಾಗಲೇ ನೀಡಲಾಗಿದೆ' ಎಂದು ತಿಳಿಸಿದರು.
`ಸ್ಪೀಕರ್ ಮತ್ತು ಸಭಾಪತಿ ಅವರಿಗೆ ವಸತಿ ಗೃಹ ನೀಡುವಂತೆ ಮನವಿ ಮಾಡಲಾಗಿದೆ. ಜತೆಗೆ ಹುದ್ದೆ ಆಧಾರಿತ ವಸತಿ ಕಲ್ಪಿಸಲು ಸರಕಾರವನ್ನು ಕೋರಲಾಗಿದೆ. ಸಂಸದೀಯ ಕ್ಲಬ್ ಬಗ್ಗೆಯೂ ಚರ್ಚೆ ಮುಂದುವರೆಯಲಿದೆ. ಸಮಿತಿಗಳಿಗೆ ತಪ್ಪು ಮಾಹಿತಿ ನೀಡಬಾರದು. ಒಂದು ವೇಳೆ ನೀಡಿದರೆ ತಪ್ಪಾಗುತ್ತದೆ. ಸಮಿತಿ ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಗೊಂದಲ ಪರಿಹರಿಸುವುದು' ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ವಿಧಾನಸಭೆ ಕಾರ್ಯದರ್ಶಿ(ಪ್ರಭಾರ) ವಿಶಾಲಾಕ್ಷಿ ಸೇರಿದಂತೆ ಹಿರಿಯ ಅಧಿಕಾರಿಗಳ ಹಾಜರಿದ್ದರು.