ಕಾಂಗ್ರೆಸ್ ಮತ್ತು ಜೆಡಿಎಸ್ ಹುಸಿ ಜಾತ್ಯತೀತ ಪಕ್ಷಗಳು: ನಟ ಚೇತನ್
ಗೃಹ ಸಚಿವರಿಗೆ ಬೆಂಬಲ ಸೂಚಿಸಿದ ನಟ
ಬೆಂಗಳೂರು, ಸೆ. 12: `ಕಾಂಗ್ರೆಸ್ ಮತ್ತು ಜೆಡಿಎಸ್ನ ಹುಸಿ ಜಾತ್ಯತೀತ ಪಕ್ಷಗಳು. ಅವುಗಳ ಮುಖ್ಯ ಉದ್ದೇಶ ಅಧಿಕಾರ ಅಷ್ಟೇ' ಎಂದು ಚಿತ್ರನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಟ್ವೀಟ್ ಮಾಡಿರುವ ಅವರು, `ಬಿಜೆಪಿ ರಚನೆಯಲ್ಲೆ ಒಂದು ಕೋಮುವಾದಿ ಪಕ್ಷ. ನಮಗೆ ನಿಜವಾದ ಜಾತ್ಯತೀತ ರಾಜಕೀಯ ಬೇಕು ಅಂದರೆ ಯಾವುದೇ ಮತಕ್ಕೆ ಸೇರದ್ದು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸಂವಿಧಾನದ ಆಶಯವನ್ನು ನಡೆಸಿಕೊಳ್ಳುತ್ತಿಲ್ಲ. ಅದನ್ನ ನಾವು ಮಾಡಬೇಕು ಮತ್ತು ಮಾಡೇ ಮಾಡುತ್ತೇವೆ' ಎಂದು ಶಪತ ಮಾಡಿದ್ದಾರೆ.
ಗೃಹ ಸಚಿವರಿಗೆ ಬೆಂಬಲ: `ಕಳೆದ ತಿಂಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ನಂತರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತಪ್ಪು ನಿರ್ವಹಣೆ ಮತ್ತು ಸೂಕ್ಷ್ಮತೆ ಕೊರತೆಯನ್ನು ನಾನು ದೂಷಿಸಿದ್ದೆ. ಆದರೆ, ಇಂದು ಪುನಃ 2018ರ ಸ್ಯಾಂಡಲ್ವುಡ್ ಮೀಟೂ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ತೆರೆಯುವ ನಿರ್ಧಾರ ಕೈಗೊಂಡಿದ್ದಕ್ಕಾಗಿ ಅವರಿಗೆ ನನ್ನ ಪೂರ್ಣ ಬೆಂಬಲ ನೀಡುತ್ತೇನೆ. ನಾವು ಎಲ್ಲ ಸಮಸ್ಯೆಗಳನ್ನೂ ವಿಮರ್ಶಾತ್ಮಕವಾಗಿ ಮತ್ತು ವಸ್ತುನಿಷ್ಟವಾಗಿ ನೋಡಬೇಕು' ಎಂದು ಚೇತನ್ ಹೇಳಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) September 12, 2021