ಬೆಲೆ ಏರಿಕೆ ವಿರೋಧಿಸಿ ನಾಳೆ ಕಾಂಗ್ರೆಸ್ ನಿಂದ ವಿಧಾನಸೌಧಕ್ಕೆ `ಎತ್ತಿನಗಾಡಿ ಚಲೋ'
ಬೆಳಗಾವಿ, ಸೆ. 12: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ನಾಳೆ(ಸೆ.13) ವಿಧಾನಸೌಧಕ್ಕೆ `ಎತ್ತಿನ ಗಾಡಿ'ಯಲ್ಲಿ ತೆರಳುವ ಮೂಲಕ ತೆರಳುವುದಲ್ಲದೆ, ವಿಧಾನ ಮಂಡಲ ಅಧಿವೇಶನದಲ್ಲಿ ಈ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಾಂಗ್ರೆಸ್ ತ್ಯಜಿಸಲು ನನಗೆ ಬಿಜೆಪಿಯವರಿಂದ ಹಣದ ಆಮಿಷವೊಡ್ಡಿದ್ದರು' ಎಂದು ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಸತ್ಯವಾದ ಮಾತನ್ನು ಹೇಳಿದ್ದು, ನಾನು ಅವರನ್ನು ಅಭಿನಂದಿಸುತ್ತೇನೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶ್ರೀಮಂತ ಪಾಟೀಲ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಎಸಿಬಿಯವರು ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಹಣದ ಆಮಿಷ ಒಡ್ಡಿದವರು ಯಾರು ಎನ್ನುವುದನ್ನು ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.
`ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಅ.2ರಿಂದ ಒಂದು ತಿಂಗಳ ವರೆಗೆ ಪ್ರತಿ ಗ್ರಾ.ಪಂ.ಗಳಲ್ಲೂ ಸಭೆ ನಡೆಸಿ, ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಬೇಕು. ನೆರೆ ಪರಿಹಾರ ಸಿಕ್ಕಿದೆಯೇ, ಉದ್ಯೋಗ ಖಾತ್ರಿ ಹಣ ಬಾಕಿ ಸಹಿತ ಇನ್ನಿತ ವಿಷಯಗಳನ್ನು ಚರ್ಚಿಸಬೇಕು. ವಾರ್ಡ್ಗಳಲ್ಲೂ ಪ್ರತಿಭಟನೆ ನಡೆಸಬೇಕೆಸಸಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲ ಮುಖಂಡರು ಪಾಲ್ಗೊಳ್ಳಲಿದ್ದಾರೆ' ಎಂದರು.