ಸುಬ್ರಮಣಿಯನ್ ಸ್ವಾಮಿ ಓರ್ವ "ಸ್ವತಂತ್ರ ರಾಜಕಾರಣಿ" ಎಂದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ತನ್ನದೇ ಪಕ್ಷದ ವಿರುದ್ಧ ಮತ್ತು ನಾಯಕತ್ವದ ವಿರುದ್ಧ ಮಾತನಾಡುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಓರ್ವ ಸ್ವತಂತ್ರ ರಾಜಕಾರಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. ವಿಧಾಸಭಾ ಅಧಿವೇಶನದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
"ಸುಬ್ರಮಣಿಯನ್ ಸ್ವಾಮಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಅವರು ಯಾವುದೇ ಪಕ್ಷದಲ್ಲಿದ್ದರೂ, ಸ್ವತಂತ್ರ ರಾಜಕಾರಣಿಯಂತೆ ಇದ್ದಾರೆ. ಅವರು ಮನಸ್ಸಿಗೆ ಬಂದದ್ದನ್ನು ಹೇಳುತ್ತಾರೆ. ಅವರ ವಿಶ್ಲೇಷಣೆಯ ಆಧಾರದ ಮೇಲೆ ಅವರು ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ" ಎಂದು ಬೊಮ್ಮಾಯಿ ವಿಧಾನಸಭಾ ಅಧಿವೇಶನದ ವೇಳೆ ನಡೆದ ಬೆಲೆ ಏರಿಕೆಯ ಕುರಿತ ಚರ್ಚೆಯಲ್ಲಿ ಹೇಳಿದರು.
"ಸುಬ್ರಮಣಿಯನ್ ಸ್ವಾಮಿ ಜನತಾ ಪಕ್ಷ ಮತ್ತು ಜನತಾದಳದ ನಾಯಕತ್ವದ ಕುರಿತೂ ಮಾತನಾಡಿದ್ದಾರೆ. ಸರಕಾರದಲ್ಲಿದ್ದುಕೊಂಡೇ ಅವರು ಅಂದಿನ ಪ್ರಧಾನಮಂತ್ರಿ ಚಂದ್ರಶೇಖರ್ ವಿರುದ್ಧ ಮಾತನಾಡಿದ್ದರು. ಅದು ಸುಬ್ರಮಣಿಯನ್ ಸ್ವಾಮಿಯವರ ವ್ಯಕ್ತಿತ್ವ" ಎಂದು ಅವರು ಹೇಳಿದರು.
ಸುಬ್ರಮಣಿಯನ್ ಸ್ವಾಮಿಯವರು ಫೆಬ್ರವರಿ,2, 2021ರಂದು ಮಾಡಿದ್ದ ಟ್ವೀಟ್ ನಲ್ಲಿ "ರಾಮನ ಭಾರತದಲ್ಲಿ ಪೆಟ್ರೋಲ್ ಗೆ 93ರೂ., ಸೀತೆಯ ನೇಪಾಳದಲ್ಲಿ 53ರೂ., ರಾವಣನ ಲಂಕಾದಲ್ಲಿ 51ರೂ." ಎಂದಿದ್ದರು. ಇದನ್ನು ಸಿದ್ದರಾಮಯ್ಯ ಉಲ್ಲೇಖಿಸಿದ ವೇಳೆ ಸಿಎಂ ಬೊಮ್ಮಾಯಿ ಈ ರೀತಿ ಉತ್ತರ ನೀಡಿದರು.
"ಇದನ್ನು ಹೇಳಿದ್ದು ನಾನಲ್ಲ ಆದರೆ ಬಿಜೆಪಿಯ ಹಾಲಿ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ. ಅವರು ನಿಮ್ಮ ತಂದೆಯ (ಮಾಜಿ ಸಿಎಂ ದಿವಂಗತ ಎಸ್ ಆರ್ ಬೊಮ್ಮಾಯಿ) ಸ್ನೇಹಿತ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಅವರು ಸರಿಯಿಲ್ಲದಿದ್ದರೆ ಸ್ವಾಮಿಯನ್ನು ವಜಾಗೊಳಿಸಲಿ ಎಂದು ಅವರು ಬಿಜೆಪಿ ನಾಯಕತ್ವಕ್ಕೆ ಸವಾಲು ಹಾಕಿದರು.
"ಬಿಜೆಪಿ ನಾಯಕತ್ವವು ಅವರ ಹೇಳಿಕೆಯನ್ನು ಸಹಿಸಿಕೊಂಡರೆ ನನ್ನ ಅಭ್ಯಂತರವಿಲ್ಲ. ಅವರು ಅರ್ಥಶಾಸ್ತ್ರಜ್ಞ ಎಂಬುದನ್ನು ಮರೆಯಬೇಡಿ ಮತ್ತು ನೀವು ಅವರನ್ನು ನಿಮ್ಮ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೀರಿ" ಎಂದು ಸಿದ್ದರಾಮಯ್ಯ ಹೇಳಿದರು.