ಸದಾಶಿವ ಆಯೋಗದ ವರದಿ ಅಸಂವಿಧಾನಿಕ : ಜಾರಿಗೊಳಿಸಲು ಮುಂದಾದ ಸಚಿವರನ್ನು ಸಂಪುಟದಿಂದ ಕೈಬಿಡಲು ಆಗ್ರಹ
ಬೆಂಗಳೂರು, ಸೆ.17: ಬೋವಿ, ಬಂಜಾರ, ಛಲವಾದಿ, ಕೊರಚ, ಕೊರಮ ಅಲೆಮಾರಿ ಸಮುದಾಯಗಳಿಗೆ ಕಂಟಕವಾಗಿರುವ ಸದಾಶಿವ ಆಯೋಗದ ವರದಿಯು ಅಸಂವಿಧಾನಿಕವಾದದ್ದು. ಆದರೆ ಅದನ್ನು ಜಾರಿಗೊಳಿಸಲು ತುದಿಗಾಲಿನಲ್ಲಿ ನಿಂತಿರುವ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯ್ಕ್ ಸರಕಾರಕ್ಕೆ ಆಗ್ರಹಿಸಿದರು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿಯು ಏಕಪಕ್ಷೀಯವಾಗಿದೆ. ವರದಿಯಲ್ಲಿ ಉಲ್ಲೇಖಿಸಲಾಗಿರುವ ಒಳ ಮೀಸಲಾತಿಯು ಸಂವಿಧಾನಬಾಹಿರವಾದುದು. ಆದ್ದರಿಂದ ಅದನ್ನು ಸಾರ್ವಜನಿಕ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಹಾಗೆಯೇ, ಹೋರಾಟದ ಹೆಸರಿನಲ್ಲಿ ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲ್ ಮತ್ತು ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸರಕಾರವು ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ ಅವರು ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಇದೇ ಸೆ.24ರಂದು ರಾಜ್ಯವ್ಯಾಪಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.