ಯುಪಿಎಸ್ಸಿ ಪರೀಕ್ಷೆ: ಬೆಳಗಾವಿಯ ಶಾಕೀರ್ ಅಹ್ಮದ್ ರಿಗೆ 583ನೇ ರ್ಯಾಂಕ್
ಬೆಳಗಾವಿ, ಸೆ.25: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ನಡೆಸಿದ 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ (ಐಎಎಸ್) ಮುಖ್ಯ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರ ಸೈಟ್ ನಿವಾಸಿ ಶಾಕೀರ್ ಅಹ್ಮದ್ ತೊಂಡಿಖಾನ 583ನೇ ರ್ಯಾಂಕ್ ಗಳಿಸಿದ್ದಾರೆ.
ಬಿ.ಇ. ಪದವೀಧರರಾಗಿರುವ 31 ವರ್ಷದ ಶಾಕೀರ್ ಅಹ್ಮದ್, ಪ್ರಸಕ್ತ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ತರಬೇತಿಯಲ್ಲಿದ್ದಾರೆ. ಕೆಲಸದಲ್ಲಿದ್ದುಕೊಂಡೇ ಓದಿ ಅವರು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ್ದಾರೆ.
ಶಾಕೀರ್ ಅಹ್ಮದ್ ಅವರು ಕೆಪಿಎಸ್ಸಿಯು ನಡೆಸಿದ 2014ನೇ ಸಾಲಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. ಮತ್ತೆ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದ ಅವರು 2015ರಲ್ಲಿ ಫಲಿತಾಂಶ ಸುಧಾರಿಸಿಕೊಂಡಿದ್ದರು. ಇವರು ಬೆಂಗಳೂರಿನ ಬಿಎಂಎಸ್ ಎಂಜಿಜಿಯರಿಂಗ್ (ಬಿಇ, ಇ ಆ್ಯಂಡ್ ಸಿ ವಿಭಾಗ) ಪದವಿಯನ್ನು ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ.
ಶಾಕೀರ್ ಅವರು ಕೃಷಿ ಇಲಾಖೆ ನಿವೃತ್ತ ನೌಕರ ಅಕ್ಬರ್ ಸಾಬ್ ತೊಂಡಿಖಾನ ಹಾಗೂ ಗೃಹಿಣಿಯಾಗಿರುವ ಶಹನಾಝ್ ಬೇಗಂ ದಂಪತಿಯ ಪುತ್ರ.