ಭಾರತ್ ಬಂದ್; ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಇಲ್ಲ
ಬೆಂಗಳೂರು, ಸೆ. 26: ಕೇಂದ್ರದ ಕೃಷಿ ಕಾಯ್ದೆ ರದ್ದತಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ನಾಳೆ(ಸೆ.27) ಸಂಯುಕ್ತ ಕಿಸಾನ್ ಮೋರ್ಚಾ `ಭಾರತ್ ಬಂದ್' ಕರೆ ನೀಡಿದ್ದರೂ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ ಸಂಚಾರದಲ್ಲಿ ಯಾವುದೆ ವ್ಯತ್ಯಯ ಇಲ್ಲ ಎಂದು ತಿಳಿಸಲಾಗಿದೆ.
ಕೆಎಸ್ಸಾರ್ಟಿಸಿ ಸೇರಿದಂತೆ ಸಾರಿಗೆ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದು, ಸಂಸ್ಥೆಯ ಬಸ್ಗಳಿಗೆ ಯಾವುದೇ ಆಸ್ತಿಗೆ ಹಾನಿಯಾಗದಂತೆ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಹೆಚ್ಚಿನ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಿರುವುದಾಗಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ. ಜೊತೆಗೆ ಆಟೋರಿಕ್ಷಾ ಮಾಲಕರು ಮತ್ತು ಚಾಲಕರು ಬಂದ್ಗೆ ನೈತಿಕ ಬೆಂಬಲ ನೀಡಿದ್ದಾರೆ. ಕೋವಿಡ್, ಬೆಲೆ ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆಟೋಗಳ ಸಂಚಾರ ಬಂದ್ ಮಾಡುವುದಿಲ್ಲ ಎಂದು ರಿಕ್ಷಾ ಚಾಲಕರ ಸಂಘಟನೆಗಳು ತಿಳಿಸಿವೆ.
ಲಾರಿ ಮಾಲಕರ ಸಂಘ ಭಾರತ್ ಬಂದ್ಗೆ ನೈತಿಕ ಬೆಂಬಲ ನೀಡಿದ್ದು, ಇನ್ನೂ ರಾಜ್ಯದ ಟ್ಯಾಕ್ಸಿ ಮಾಲಕರ ಸಂಘವೂ ಬಂದ್ ಬೆಂಬಲಿಸಿಲ್ಲ. ಓಲಾ ಮತ್ತು ಊಬರ್ ಟ್ಯಾಕ್ಸಿಗಳು ಸಂಚಾರ ಇರಲಿದೆ. ಹೋಟೆಲ್ ಮಾಲಕರ ಸಂಘವು ಬಂದ್ಗೆ ಬೆಂಬಲ ಘೋಷಿಸಿದ್ದರೂ, ಹೋಟೆಲ್ಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದೆ.