ದೇಶವನ್ನು ಕಿತ್ತುಕೊಂಡ ಬ್ರಾಹ್ಮಣರ ಜೊತೆ ಬೌದ್ಧರ ಸಂಘರ್ಷ ನಡೆಯುತ್ತಿದೆ: ಜ್ಞಾನಪ್ರಕಾಶ್ ಸ್ವಾಮೀಜಿ
ಮೈಸೂರು, ಅ.5: ಭಾರತದ ಇತಿಹಾಸವನ್ನು ಬಲ್ಲವರು ಇಬ್ಬರೇ ಒಬ್ಬರು ದೇಶವನ್ನು ಕಳೆದುಕೊಂಡವರು, ಮತ್ತೊಬ್ಬರು ದೇಶವನ್ನು ಕಿತ್ತುಕೊಂಡವರು. ಹಾಗಾಗಿ ದೇಶವನ್ನು ಕಿತ್ತುಕೊಂಡ ಬ್ರಾಹ್ಮಣರು ಮತ್ತು ಬೌದ್ಧರ ನಡುವೆ ಸಂಘರ್ಷ ಏರ್ಪಟ್ಟಿದೆೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಷ ದಸರಾ ಆಚರಣಾ ಸಮಿತಿಯ ವತಿಯಿಂದ ನಗರದ ಅಶೋಕಪುಂನಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ನಡೆದ ಮಹಿಷ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ದೇಶವನ್ನು ಆಳಿದವರು ನಾಗಕುಲತಿಲಕರು, ನಾಗಜನರು, ಬೌದ್ಧರು ಮತ್ತು ಆದಿವಾಸಿಗಳು. ಆದರೆ ಬ್ರಾಹ್ಮಣರು ದೇಶವನ್ನು ಕಿತ್ತುಕೊಂಡು ಆಡಳಿತ ನಡೆಸುತ್ತಿದ್ದಾರೆ. ಲೋಕಸಭೆಯಲ್ಲಿ ಇರಬೇಕಾದವರು ಇಂದು ಬೀದಿಯಲ್ಲಿದ್ದಾರೆ. ಹಾಗಾಗಿಯೇ ಬಹುಜನರ ಮಹಿಷ ದಸರಾ ಆಚರಣೆಗೆ ಅಧಿಕಾರಿಗಳು ಅವಕಾಶ ಕೊಡದೆ ಒಂದು ಪಕ್ಷದ ಏಜೆಂಟ್ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ವೈಚಾರಿಕತೆ, ಜಾಗೃತಿಯಿಂದ ಇರಬೇಕಾದ ಸಮುದಾಯ ಸತ್ತುಹೋಗಿದೆ. ಹಾಗಾಗಿಯೇ ವೈದಿಕ ಶಾಹಿಗಳು ತಮ್ಮ ದರ್ಪ ಮತ್ತು ಆಡಳಿತವನ್ನು ತೋರಿಸುತ್ತಿವೆ. ಇನ್ನು ಮುಂದಾದರೂ ಬಹುಜನರು ಜಾಗೃತರಾಗಿ ಬ್ರಾಹ್ಮಣಶಾಹಿಗಳನ್ನು ದೂರ ಇಡಬೇಕು ಎಂದು ಕರೆ ನೀಡಿದರು.
ಈ ಭೂಮಿ ಮಹಿಷ ಮಂಡಲಕ್ಕೆ ಸೇರಿದ್ದು, ನಾಗಬೌದ್ಧರು, ನಾಗಕುಲತಿಲಕರ ದೇಶ. ಈ ದೇಶವನ್ನು ಗುಲಾಮಗಿರಿಗೆ ತಳ್ಳುವ ಕೆಲಸವನ್ನು ವೈದಿಕ ಶಾಹಿಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಇಂತಹ ಆಟ ಇನ್ನು ಹೆಚ್ಚು ದಿನ ನಡೆಯುವುದಿಲ್ಲ. ನಿಮ್ಮ ಸುಳ್ಳುಗಳು ಬಹುಜನರಿಗೆ ಅರ್ಥವಾಗಿದ್ದು, ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಇಂದು ನಮ್ಮನ್ನು ಆಳುತ್ತಿರುವವರಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವೇ ಇಲ್ಲ, ಹಾಗಾಗಿಯೇ ಹಾಡ ಹಗಲೇ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹರಿಸಿ ಕೊಲೆ ಮಾಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗಾಳಿಗ ತೂರಿದ್ದಾರೆ ಎಂದು ಕಿಡಿಕಾರಿದರು.
ಮಾಧ್ಯಮಗಳು ಮಾನವೀಯತೆಯಿಂದ ನಡೆದುಕೊಳ್ಳಬೇಕು: ಮಾಧ್ಯಮಗಳು ನೈಜ ಸ್ಥಿತಿಯನ್ನು ತಿಳಿಸುವ ಕೆಲಸವನ್ನು ಮಾಡಬೇಕು. ಹಾಗಾದಾಗ ಮಾತ್ರ ಬದಲಾವಣೆ ಸಾಧ್ಯ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧಮ್ಮ ಧೀಕ್ಷೆ ಸ್ವೀಕರಿಸುವ ವೇಳೆ ಲಕ್ಷಾಂತರ ಮಂದಿ ಅವರನ್ನು ಅನುಸರಿಸಿದರು. ಆದರೆ ಅಂದಿನ ದೂರದರ್ಶನ ಅದನ್ನು ತೋರಿಸದೆ ಆರೆಸ್ಸೆಸ್ ಕಚೇರಿಯಲ್ಲಿ ನಡೆಯುತ್ತಿದ್ದ ಆಯುಧಪೂಜಾ ಕಾರ್ಯಕ್ರಮವನ್ನು ತೋರಿಸಿದವು. ಮಾಧ್ಯಮಗಳು ಮಾನವೀಯತೆ, ನೈಜ ಸುದ್ದಿಗಳನ್ನು ಬಿತ್ತರಿಸುವ ಕೆಲಸವನ್ನು ಮಾಡಬೇಕು. ಮಾಧ್ಯಮಗಳು ಮಾರಾಟವಾದರೆ ಪ್ರಜಾಪ್ರಭುತ್ವ ಸತ್ತು ಹೋಗುತ್ತದೆ ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ಸಾರ್ವಜನಿಕ ಶಿಕ್ಷಣವನ್ನು ಸಾಂಪ್ರದಾಯಿಕ ಶಿಕ್ಷಣ ನೀತಿಯನ್ನಾಗಿ ಮಾಡಿರುವುದು ಮೋದಿ ಸರಕಾರದ ಹೆಗ್ಗಳಿಕೆಯಾಗಿದೆ. ಸಾಂಪ್ರದಾಯಿಕ ಶಿಕ್ಷಣ ಮೂಲಕ ಗುರುಕುಲ ಪದ್ಧತಿಯನ್ನು ಜಾರಿಗೊಳಿಸಿ ಬಹುಜನರ ಬದುಕನ್ನು ನಾಶಮಾಡುವ ಕೆಲಸವಾಗುತ್ತಿದೆ.
-ಜ್ಞಾನಪ್ರಕಾಶ್ ಸ್ವಾಮೀಜಿ,ಉರಿಲಿಂಗಿ ಪೆದ್ದಿಮಠ
ಆರೆಸ್ಸೆಸ್ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಅಲ್ಲ, ಅದು ರಾಷ್ಟ್ರೀಯ ಸುಳ್ಳರ ಸಂಘ, ಇದು ಬರೀ ಸುಳ್ಳುಗಳನ್ನೇ ಸೃಷ್ಟಿಸುವ ಕೇಂದ್ರವಾಗಿದೆ. ಭಾರತದ ಪಠ್ಯ ಪುಸ್ತಕದಲ್ಲಿ ಶೇ.70ರಷ್ಟು ಸುಳ್ಳುಗಳನ್ನೇ ತುಂಬಲಾಗಿದೆ. ಹಾಗಾಗಿ ಬಹುಜನರು ಮೊದಲು ಅಂಬೇಡ್ಕರ್ ಪುಸ್ತಕಗಳನ್ನು ಓದುವ ಮೂಲಕ ಸತ್ಯವನ್ನು ಅರಿಯಬೇಕಿದೆ.
- ಪ್ರೊ.ಕೆ.ಎಸ್.ಭಗವಾನ್, ಹಿರಿಯ ಸಾಹಿತಿ