ಮಂಡ್ಯದಲ್ಲಿ ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ: ಪ್ರಕರಣ ದಾಖಲು
ವೀಡಿಯೊ ವೈರಲ್
ಮಳವಳ್ಳಿ, ಅ.21: ದಲಿತ ಯುವಕನೊಬ್ಬನ ವಿರುದ್ಧ ಹಸು ಕದ್ದೊಯ್ಯುತ್ತಿದ್ದ ಆರೋಪದ ಮೇಲೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವುದಲ್ಲದೆ ಆತನ ಕೈಗಳನ್ನು ಹಿಮ್ಮುಖವಾಗಿ ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಅಮಾನವೀಯ ಘಟನೆ ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವಕನನ್ನು ಹಸುವಿಗೆ ಕಟ್ಟಿ ಮೆರವಣಿಗೆ ನಡೆಸಿದ ಅಮಾನವೀಯ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಸಂಬಂಧ ನಾಲ್ವರ ವಿರುದ್ದ ಮೊಕದ್ದಮೆ ದಾಖಲಿಸಿ ಕೊಂಡಿರುವ ಮಳವಳ್ಳಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಾಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ ಎಂಬವನೇ ಹಲ್ಲೆಗೊಳಗಾದ ಯುವಕ.
ದುಗ್ಗನಹಳ್ಳಿ ಗ್ರಾಮದ ರಾಜು ಎಂಬುವವರಿಂದ ಹಸು ವೊಂದನ್ನು ಖರೀದಿ ಮಾಡಿದ್ದು, ಹಾಲು ಕೊಡುವ ಹಸು ನೀಡುವುದಾಗಿ 59,000 ಸಾವಿರ ಹಣವನ್ನು ಪಡೆದು ಹಾಲು ನೀಡದ ಗೊಡ್ಡು ಹಸುವನ್ನು ನೀಡಿ ವಂಚನೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಈ ಸಂಬಂಧ ರಾಜು ರವರನ್ನು ಪ್ರಶ್ನೆ ಮಾಡಿದಾಗ, ಅಕ್ಟೋಬರ್ 12 ರಂದು ಬೇರೊಂದು ಹಸುವನ್ನು ನೀಡುವುದಾಗಿ ಮನೆಗೆ ಕರೆಸಿದ್ದ.
ಅದರಂತೆ ಬೆಳಿಗ್ಗೆ 9 ಗಂಟೆಗೆ ನಾನು ನನ್ನ ಸ್ನೇಹಿತನೊಂದಿಗೆ ದುಗ್ಗನಹಳ್ಳಿ ಗ್ರಾಮದ ರಾಜು ಮನೆಗೆ ತೆರಳಿದಾಗ ಪೂರ್ವ ನೀಯೋಜಿತ ಎಂಬಂತೆ ಅವರ ಮನೆಯಲ್ಲಿ ಅವರ ಸಂಬಂಧಿಕರು ಹಸುವನ್ನು ನೀಡಿ ರಾಜು ಅವರು ಜಮೀನಿನಲ್ಲಿದ್ದಾರೆ ಅಲ್ಲಿಗೆ ಹೋಗುವಂತೆ ತಿಳಿಸಿದ್ದಾರೆ.
ಅದರಂತೆ ಹಸುವಿನೊಂದಿಗೆ ಜಮೀನಿಗೆ ಹೋದಾಗ ನನ್ನ ಹಸುವನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಕೂಗಾಡಿ ರಂಪಾಟ ಮಾಡಿದ ರಾಜು ತಮ್ಮ ಹಿಂಬಾಲಕರಿಂದ ಹಿಡಿದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈತ ಹೊಲೆಯ ಜಾತಿಯವನು, ಹಣಕೊಳ ಗ್ರಾಮಕ್ಕೆ ಸೇರಿದವನು, ನನ್ನ ಹಸುವನ್ನು ಕದ್ದುಕೊಂಡು ಹೋಗುತ್ತಿದ್ದಾನೆ, ಎಂದು ಜನರನ್ನು ಸೇರಿಸಿ ನನ್ನನ್ನು ಮರಕ್ಕೆ ಕಟ್ಟಿಹಾಕಿ ಹಗ್ಗದಿಂದ ಬಿಗಿದು ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ರಾಜು ಮಳವಳ್ಳಿಯ ವರಾದ ಗಿರೀಶ್, ನನ್ನ ಹಲ್ಲೆ ಮೇಲೆ ಹಲ್ಲೆ ನಡೆಸಿದ್ದು ಇದಕ್ಕೆ ಮಳವಳ್ಳಿಯ ಮಲ್ಲಯ್ಯ ಹಾಗೂ ಹಣಕೊಳ ಗ್ರಾಮದ ಸುಂದರಮ್ಮ ಹಾಗೂ ದುಗ್ಗನಹಳ್ಳಿ ಗ್ರಾಮದ ಇತರರು ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿದ್ದಾರೆ.
ನಂತರ ತನ್ನ ಕೈಯನ್ನು ಹಸುವಿನ ಹಗ್ಗಕ್ಕೆ ಕಟ್ಟಿ ಸುಮಾರು ಒಂದು ಕಿ ಮೀ ವರೆಗೆ ರಸ್ತೆಯುದ್ದಕ್ಕೂ ನಡೆಸಿ ಮೆರವಣಿಗೆ ಮಾಡಿ ಅವಮಾನ ಮಾಡಿ ನಂತರ ಬಿಟ್ಟು ಕಳುಹಿಸಿದರೆಂದು ಸುರೇಶ್ ವರ್ಧನ್ ದೂರಿನಲ್ಲಿ ವಿವರಿಸಿದ್ದಾರೆ.
ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಸುರೇಶ್ ವರ್ಧನ್ ನನ್ನ ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡಿ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರೊಂದಿಗೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೃತ್ಯ ನಡೆದ ಸ್ಥಳಕ್ಕೆ ಮಳವಳ್ಳಿ ಉಪವಿಭಾಗದ ಡಿ ವೈ ಎಸ್ ಪಿ,ಲಕ್ಷ್ಮೀನಾರಾಯಣ ಪ್ರಸಾದ್, ವೃತ್ತ ನೀರಿಕ್ಷಕ ಡಿ. ಪಿ. ಧನರಾಜು, ಪಿ. ಎಸ್. ಐ, ರವಿಕುಮಾರ್ ಡಿ. ಭೇಟಿ ನೀಡಿದ್ದಾರೆ.
ದಲಿತ ಮುಖಂಡ ಸುಂದರ ಹಣಕೊಳ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ದಲಿತ ವ್ಯಕ್ತಿಗೆ ಮೋಸ ಮಾಡಿದಲ್ಲದೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ದ್ದಾರೆ.