2023ರ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
'ಎಲ್ಲರೂ ಹೊಟ್ಟೆಪಾಡಿಗಾಗಿಯೇ ರಾಜಕಾರಣ ಮಾಡುತ್ತಾರೆ'
ವಿಜಯಪುರ, ನ. 6: 'ಎಲ್ಲರೂ ಹೊಟ್ಟೆಪಾಡಿಗಾಗಿಯೇ ರಾಜಕಾರಣ ಮಾಡುತ್ತಾರೆ' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ಸಿಗರು ರಾಷ್ಟ್ರ ನಾಯಕರನ್ನಾಗಿ ಮಾಡಲಿಲ್ಲ. ಅಂಬೇಡ್ಕರ್ ಸಾವಿನಲ್ಲೂ ರಾಜಕೀಯ ಮಾಡಲಾಯಿತು. ಇದೀಗ ಎಲ್ಲರೂ ಹೊಟ್ಟೆಪಾಡಿಗಾಗಿ ರಾಜಕೀಯ ಮಾಡುತ್ತಾರೆ' ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮೀಸಲಾತಿ ನೀಡಬೇಕು: 'ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು. ಎಸ್ಟಿ ಸಮುದಾಯದವರಿಗೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು. ಜೊತೆಗೆ ಮರಾಠ, ಪಂಚಮಸಾಲಿ, ಆದಿಬಣಜಿಗ, ಕೂಡು ಒಕ್ಕಲಿಗ ಸೇರಿದಂತೆ ಇತರೆ ಸಮುದಾಯಗಳಿಗೆ ಹಿಂದುಳಿದ ವರ್ಗ `2-ಎ' ಮಾನ್ಯತೆ ನೀಡಬೇಕು. ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದಿದ್ದರೆ ನಾನೇ ವಿಧಾನಸೌಧದಲ್ಲಿ ಧರಣಿ ಕೂಡುತ್ತೇನೆ' ಎಂದು ತಮ್ಮದೆ ಪಕ್ಷದ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಗೆಲುವಿಗೆ ಪ್ರಯತ್ನ: ಸಿಂದಗಿ ಉಪಚುನಾವಣೆಯಲ್ಲಿ ಮತದಾರರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಸಾಮೂಹಿಕ ನಾಯಕತ್ವ, ಕಾರ್ಯಕರ್ತರು ಹಾಗೂ ಮತದಾರರು ಈ ವಿಜಯಕ್ಕೆ ಕಾರಣ. ಜನರು ಪ್ರಧಾನಿ ಮೋದಿ ಅವರ ನೇತೃತ್ವ ಒಪ್ಪಿಕೊಂಡು ಉಪ ಚುನಾವಣೆಯಲ್ಲಿ ನಮ್ಮ ಪರ ತೀರ್ಪು ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದು ಯತ್ನಾಳ್ ತಿಳಿಸಿದರು.
2023ರ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ನಡೆಯಲಿದೆ. ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅನಾರೋಗ್ಯದ ಕಾರಣ ಜನ ಸಂಪರ್ಕ ಕಡಿಮೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕೊರೋನ ಕಾಲದಲ್ಲಿ ಉತ್ತಮ ಕೆಲಸ ಮಾಡಿದ್ದರು. ಸಂಪರ್ಕ ಕೊರತೆಯಿಂದ ಬಿಜೆಪಿ ಸೋತಿದೆ. ಈ ಸೋಲನ್ನು ಸವಾಲಾಗಿ ತೆಗೆದುಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಯತ್ನಾಳ್ ನುಡಿದರು.