ಹಂಸಲೇಖರಿಗೆ ಪ್ರಗತಿಪರ ಅನ್ನಿಸಿಕೊಳ್ಳುವ ಗೀಳು: ಸಂಸದ ಪ್ರತಾಪ್ ಸಿಂಹ
ಪೇಜಾವರ ಶ್ರೀ ಕುರಿತು ಹೇಳಿಕೆ ವಿಚಾರ
ಮೈಸೂರು: ಸಂಗೀತ ನಿರ್ದೇಶಕ ಹಂಸಲೇಖರಿಗೆ ಪ್ರಗತಿಪರ ಅನ್ನಿಸಿಕೊಳ್ಳುವ ಗೀಳು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಹಂಸಲೇಖ ಅವರ ಪೇಜಾವರಶ್ರೀ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಸಂಗೀತದ ಕೆಲಸವೂ ನಿಂತುಹೋಗಿದೆ. ಚಿತ್ರರಂಗದಲ್ಲೂ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಅದಕ್ಕೆ ಪ್ರಗತಿಪರ ಅನ್ನಿ ಸಿಕೊಳ್ಳುವ ಗೀಳು ಹಿಡಿದು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಹಂಸಲೇಖ ಅವರು ಮಾತನಾಡಿರುವುದನ್ನು ನೋಡಿದರೆ ಉದ್ದೇಶಪೂರ್ವಕವಾಗೆ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದಾರೆ. ಈಗ ತೇಪೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಹಾರ ಪದ್ದತಿ ಬಗ್ಗೆ ಮಾತನಾಡುವ ಹಂಸಲೇಖ ಮುಸ್ಲಿಮರನ್ನು ಅವರ ಮನೆಗೆ ಕರೆದು ಹಂದಿ ಮಾಂಸ ಮಾಡಿ ಊಟಕ್ಕೆ ಹಾಕಿಸಲಿ ನೋಡೋಣ, ಹಂದಿಯನ್ನು ಇಸ್ಲಾಮ್ ನಲ್ಲಿ ನಿಷೇಧ ಮಾಡಲಾಗಿದೆ ಎಂದು ಹೇಳಿದರು.
ಪೇಜಾವರ ಶ್ರೀಗಳು ಅಸಮಾನತೆಯನ್ನು ತೊಡೆದು ಹಾಕಲು ದಲಿತರ ಕೇರಿಗಳಿಗೆ ಮನೆಗಳಿಗೆ ಭೇಟಿ ನೀಡುತ್ತಿದ್ದರೇ ವಿನಹ ಆಹಾರ ಪದ್ಧತಿ ಸಮಾನತೆಗಾಗಿ ಅಲ್ಲ, ಇಷ್ಟು ಪರಿಜ್ಞಾನವೂ ಹಂಸಲೇಖರಿಗೆ ಇಲ್ಲದಿರುವುದು ನೋವು ತಂದಿದೆ ಎಂದು ಹೇಳಿದರು.