ಬಿಟ್ ಕಾಯಿನ್ ಹಗರಣ: ದಾಖಲೆ ಇದೆ ಎಂದು ನಾನು ಎಲ್ಲೂ ಹೇಳಿಲ್ಲ; ಸಿದ್ಧರಾಮಯ್ಯ
ಬೆಂಗಳೂರು, ನ. 17: `ಬಿಟ್ ಕಾಯಿನ್ ಹಗರಣ ಸಂಬಂಧ ನನ್ನ ಬಳಿ ದಾಖಲೆ ಇದೆ ಎಂದು ನಾನು ಎಲ್ಲಿಯೂ ಹೇಳಿಕೆ ನೀಡಿಲ್ಲ' ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಟ್ ಕಾಯಿನ್ ಪ್ರಕರಣದಲ್ಲಿ ಬಂಧಿತನಾಗಿರುವ ಶ್ರೀಕೃಷ್ಣ ಯಾನೆ ಶ್ರೀಕಿ ಹ್ಯಾಕಿಂಗ್ ಸಂಬಂಧ ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳುತ್ತಿದ್ದಾರೆ. ಆದರೆ, ಅವರದೇ ಸರಕಾರ ಇದೆ. ಅವರಿಗೆ ಅದನ್ನು ಕಂಡುಹಿಡಿಯುವ ಜವಾಬ್ದಾರಿ ಇದೆ. ನಾನು ದಾಖಲೆ ಇದೆ ಎಂದು ಎಲ್ಲಿ ಹೇಳಿದ್ದೆ? ಮಾತಾಡುತ್ತೇನೆ ಎಂದು ಹೇಳಿದ್ದೆ. ದಾಖಲೆ ಇದೆ ಎಂದಿರಲಿಲ್ಲ ಎಂದು ವಿವರಣೆ ನೀಡಿದರು.
`ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಖಾತೆಗಳ ಪಾಸ್ವರ್ಡ್ ಮತ್ತು ಬಹಳಷ್ಟು ಮಾಹಿತಿ ಶ್ರೀಕಿಯ ನೆನಪಲ್ಲಿ ಮಾತ್ರವೇ ಇದೆ. ಅದಕ್ಕೆ ಲಿಖಿತ ದಾಖಲೆಗಳಿಲ್ಲ. ಹೀಗಾಗಿ ಶ್ರೀಕಿ ಪ್ರಾಣಕ್ಕೆ ಅಪಾಯವಿದೆ. ಶ್ರೀಕಿ ಈಗಲೂ ಮಾದಕ ದ್ರವ್ಯ (ಡ್ರಗ್) ವ್ಯಸನಿಯೇ? ವ್ಯಸನಿಯಾಗಿದ್ದರೆ ಪೊಲೀಸರು ಈ ಬಾರಿ ಬಂಧಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ? ಡ್ರಗ್ಸ್ ವ್ಯಸನಿ ಎನ್ನುವುದು ಪರೀಕ್ಷೆಯಿಂದ ದೃಡಪಟ್ಟಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ?' ಎಂದು ಸರಕಾರ ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿದರು.