ಮೈಸೂರು ಬ್ಯಾಂಕ್, ನ್ಯಾಷನಲ್ ಬ್ಯಾಂಕ್ ಗೊತ್ತು, ಬಿಟ್ ಕಾಯಿನ್ ಬಗ್ಗೆ ಗೊತ್ತಿಲ್ಲ: ಸಚಿವ ಭೈರತಿ ಬಸವರಾಜ್
ಸಚಿವ ಭೈರತಿ ಬಸವರಾಜ್
ದಾವಣಗೆರೆ: ಬಿಟ್ ಕಾಯಿನ್ ಬಗ್ಗೆ ನನಗೆ ಗೊತ್ತಿಲ್ಲ. ಮೈಸೂರು ಬ್ಯಾಂಕ್ , ನ್ಯಾಷನಲ್ ಬ್ಯಾಂಕ್ ಗೊತ್ತು. ಅದನ್ನು ಬಿಟ್ಟು ಇದ್ಯಾವುದೋ ಬಿಟ್ ಕಾಯಿನ್ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದ ಜಿಎಂಐಟಿಯಲ್ಲಿ ಹೇಳಿಕೆ ನೀಡಿದ ಅವರು, ಈ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಎಲ್ಲಿ ನಾಪತ್ತೆ ಆಗಿದ್ದಾರೆ ಎಂಬ ವಿಚಾರ ಗೊತ್ತಿಲ್ಲ. ಮೇಲಾಗಿ ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ವಿಚಾರದ ಬಗ್ಗೆ ಭವಿಷ್ಯ ಹೇಳುತ್ತಿದ್ದಾರೆ. ಬಹುಶಃ ಅವರು ಭವಿಷ್ಯ ಹೇಳುವುದನ್ನು ಕಲಿತಿರಬೇಕು ಎಂದರು.
ಜಿಲ್ಲೆಯ ಹರಿಹರ, ಚನ್ನಗಿರಿ ಸೇರಿದಂತೆ ಕೆಲ ತಾಲೂಕುಗಳಲ್ಲಿ ಕಟಾವಿಗೆ ಬಂದ ಭತ್ತ ನಾಶವಾಗಿದೆ. ಇದರ ಜೊತೆಗೆ ಜಿಲ್ಲೆಯ ಬಹುತೇಕ ಕಡೆ ಮೆಕ್ಕೆಜೋಳ ಹಾಳಾಗಿದೆ. ನಿರಂತರವಾಗಿ ಸುರಿದ ಮಳೆಗೆ ಅಪಾರ ಹಾನಿ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಮೀಕ್ಷೆಗೆ ಸೂಚನೆ ನೀಡಲಾಗಿದೆ. ವರದಿ ಬಂದ ತಕ್ಷಣ ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತರಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.