ಮತಾಂತರ ನಿಷೇಧ ಕಾಯ್ದೆಗೆ ಸಮಸ್ತ ಕ್ರೈಸ್ತ ಸಮುದಾಯದ ವಿರೋಧ: ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ
ಬೆಂಗಳೂರು, ನ.19: ರಾಜ್ಯದಲ್ಲಿ ಮತಾಂತರ ಕುರಿತ ಚರ್ಚೆ ಬಹಳ ಬಿರುಸಿನಿಂದ ಇತ್ತೀಚೆಗೆ ನಡೆಯುತ್ತಿದೆ. ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ರಾಜ್ಯದ ಸಮಸ್ತ ಕ್ರೈಸ್ತ ಸಮುದಾಯವು ಒಮ್ಮನಿಸಿನಿಂದ ವಿರೋಧಿಸುತ್ತದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಈಗಾಗಲೆ ನಮ್ಮ ಸಂವಿಧಾನವು ತನ್ನ ಪ್ರಜೆಗಳಿಗೆ ಯಾವುದೆ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ. ಹೀಗಿರುವಲ್ಲಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಏನು? ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನು ಹಿಂದುಳೀದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ ಚರ್ಚುಗಳ ಮತ್ತು ಧಾರ್ಮಿಕ ಸಂಘ, ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದೆ. ಈ ಗಣತಿಯ ಉದ್ದೇಶವಾದರೂ ಏನು? ಸರಕಾರವು ಗಣತಿ ಮಾಡಬೇಕೆಂದರೆ ಮಾಡಲಿ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ನಮ್ಮ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿಯನ್ನು ನಡೆಸಲು ಆದೇಶಿಸಿರುವುದೇಕೆ? ಅದಲ್ಲದೆ, ನಮ್ಮ ಚರ್ಚುಗಳ ವಿವರಗಳೆಲ್ಲವೂ ಈಗಾಗಲೆ ಸರಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡೆಸುವ ಅಗತ್ಯವಾದರೂ ಏನು? ಎಂದು ಪೀಟರ್ ಮಚಾದೊ ಪ್ರಶ್ನಿಸಿದ್ದಾರೆ.
ಭಾರತದ ಮೊದಲ ಜನಗಣತಿಯಿಂದ ಇಲ್ಲಿಯವರೆಗೂ ದೇಶದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆಯ ಅಂಕಿ, ಅಂಶಗಳು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಬಳಿ ಇವೆ. ಭಾರತದಲ್ಲಿ ದೊಡ್ಡ ಮಟ್ಟಿಗೆ ಮತಾಂತರ ನಡೆಯುತ್ತಿದೆ ಎಂದು ಆರೋಪಿಸುವವರು ಈ ಅಂಕಿ-ಅಂಶಗಳನ್ನು ಒಮ್ಮೆ ಪರಿಶೀಲಿಸಿದರೆ ಎಲ್ಲರಿಗೂ ಸತ್ಯಾಂಶ ಅರಿವಾಗುತ್ತದೆ. ಮತಾಂತರವು ನಿಜವೇ ಆಗಿದ್ದರೆ ನಮ್ಮ ಸಮುದಾಯದ ಸಂಖ್ಯೆ ಇಷ್ಟೊತ್ತಿಗೆ ಅಧಿಕವಾಗಿರಬೇಕಿತ್ತು. ಆದರೆ, ದೇಶದ ಸ್ವಾತಂತ್ರ್ಯದ ನಂತರವೂ ಜನಸಂಖ್ಯೆಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕೇವಲ ಶೇ.1.8ರಷ್ಟು ಮಾತ್ರವಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ನಮ್ಮ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯವು ಸಾವಿರಾರು ಶಾಲಾ, ಕಾಲೇಜುಗಳ ಮತ್ತು ಆಸ್ಪತ್ರೆಗಳ ಮೂಲಕ ತನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಇತಿಹಾಸದಲ್ಲಿ ಕ್ರೈಸ್ತ ಶಾಲಾ, ಕಾಲೇಜುಗಳಲ್ಲಿ ಓದಿದವರು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡ ಕ್ರೈಸ್ತೇತರರಲ್ಲಿ ಯಾರಾದರೂ ಒಬ್ಬರು ತನ್ನನ್ನು ಮತಾಂತರಗೊಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲಿ. ಈ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆ ಎಂಬುದು ಜಾರಿಯಾದರೆ, ಅದು ಯಾವ ಒಳಿತನ್ನೂ ಮಾಡುವುದಿಲ್ಲ. ಬದಲಿಗೆ, ಆ ಕಾಯಿದೆ ಕೋಮುವಾದಿಗಳ ಕೈಗೆ ಸಿಕ್ಕಿ, ಅದನ್ನು ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಸಾಧ್ಯವಾಗಬಹುದು ಮತ್ತು ಆ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡಿಸಲು ಪ್ರಯತ್ನಿಸಬಹುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಪೀಟರ್ ಮಚಾದೊ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮೇಲಿನ ಎಲ್ಲ ಕಾರಣಗಳಿಂದ ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಹಾಗೂ ಮತಾಂತರ ನಿಷೇಧ ಕಾಯ್ದೆಯ ಜಾರಿಯ ಚಿಂತನೆಯನ್ನು ಕೈಬಿಡಬೇಕೆಂದು ರಾಜ್ಯ ಸರಕಾರಕ್ಕೆ ಕಳಕಳಿಯಿಂದ ಕ್ರೈಸ್ತ ಸಮುದಾಯವು ವಿನಂತಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.