'ಸರಿಗಮಪ' ಕಾರ್ಯಕ್ರಮಕ್ಕೆ ಮತ್ತೆ ಮರಳಿದ ಹಂಸಲೇಖ
ಹಂಸಲೇಖ
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಪೇಜಾವರ ಶ್ರೀ ಕುರಿತ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಸಾಕಷ್ಟು ಪರ-ವಿರೋಧ ಪ್ರತಿಭಟನೆಗಳು ನಡೆದಿದ್ದು, ಈ ಮಧ್ಯೆ ಝೀ ಕನ್ನಡ ವಾಹಿನಿಯ 'ಸರಿಗಮಪ' ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಂಸಲೇಖ ಅವರನ್ನು ಝೀ ಕನ್ನಡ ವಾಹಿನಿಯವರೇ ದೂರ ಇಟ್ಟಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು.
ಇದೀಗ ಈ ಕುರಿತು ಝೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ತನ್ನ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿ 'ಮುಂದಿನ ವಾರದಿಂದ ಎಂದಿನಂತೆ ಹಂಸಲೇಖ ಅವರು ನಮ್ಮೊಂದಿಗಿರುತ್ತಾರೆ' ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಾಘವೇಂದ್ರ ಹುಣಸೂರು ಅವರು, ''ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ.'' ಎಂದು ಹೇಳಿದ್ದಾರೆ.
ರಾಘವೇಂದ್ರ ಹುಣಸೂರು ಅವರಿಗೆ ಹಂಸ ಲೇಖ ಅವರು ಬರೆದಿರುವ ಪತ್ರದ ಸಾರಾಂಶ
ಡಿಯರ್ ರಘು, ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರುತ್ತೇನೆ. ಸಂಗೀತ ಕಲಹಗಳನ್ನು ತಪ್ಪಿಸುತ್ತದೆ’
- ಹಂಸಲೇಖ, ಖ್ಯಾತ ಸಂಗೀತ ನಿರ್ದೇಶಕ