ಚಿಕ್ಕಮಗಳೂರು: ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಇಬ್ಬರು ಕಾರ್ಮಿಕರು ಮೃತ್ಯು, ಮತ್ತೋರ್ವ ಅಸ್ವಸ್ಥ
ಚಿಕ್ಕಮಗಳೂರು, ನ.28: ನೀರಿನ ಸಂಪೊಂದನ್ನು ಸ್ವಚ್ಛಗೊಳಿಸಲು ಟ್ಯಾಂಕ್ಗೆ ಇಳಿದಿದ್ದ ಮೂವರ ಪೈಕಿ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಕಡೂರು ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿ ರವಿವಾರ ಮಧ್ಯಾಹ್ನ ವರದಿಯಾಗಿದೆ.
ಕಡೂರು ಪಟ್ಟಣದ ಸುಭಾಷ್ನಗರದ ನಿವಾಸಿ ಕುಮಾರ್(50), ಕಲ್ಲಾಪುರ ಗ್ರಾಮದ ವಸಂತ್(35) ಮೃತ ದುರ್ದೈವಿಗಳಾಗಿದ್ದು, ಮತ್ತೋರ್ವ ಕಾರ್ಮಿಕ ಕಲೀಂ ಎಂಬವರು ಟ್ಯಾಂಕ್ನಲ್ಲಿ ಉಸಿರುಗಟ್ಟಿ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಡೂರು ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿದ್ದ ನಿರ್ಮಾಣ ಹಂತದ ಮನೆಯೊಂದರ ಟ್ಯಾಂಕ್ ಸ್ವಚ್ಛಗೊಳಿಸಲು ಮೂವರು ಕಾರ್ಮಿಕರು ಇಳಿದಿದ್ದು, ಈ ವೇಳೆ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರೇ, ಓರ್ವ ಕಾರ್ಮಿಕ ಅಸ್ಪಸ್ಥರಾಗಿದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಶವಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಇರಿಸಲಾಗಿದೆ.