ಕೊರೋನ ಮೂರನೇ ಅಲೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಾರದು: ಸಿದ್ದರಾಮಯ್ಯ ಸಲಹೆ
ಮೈಸೂರು,ನ.29: ಕೊರೋನ ಮೂರನೇ ಅಲೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಾರದು. ಹೊರ ರಾಜ್ಯಗಳಿಂದ ಬರುವವರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಿ ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆ ರೀತಿ ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡಬಾರದು. ಎರಡನೇ ಅಲೆ ನಿರ್ಲಕ್ಷಿಸಿದ ಪರಿಣಾಮ ಅನೇಕ ಸಾವುಗಳು ಸಂಭವಿಸಿದವು. ಮೂರನೇ ಅಲೆ ಬಾರದಂತೆ ಎಚ್ಚರಿಕೆ ವಹಿಸಬೇಕಾದದು ಸರ್ಕಾರದ ಕರ್ತವ್ಯ ಹಾಗಾಗಿ ಮೂರನೇ ಅಲೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಸರ್ವ ಪಕ್ಷಗಳ ಸಭೆ ಕರೆದು ಪ್ರಧಾನಿ ನರೇಂದ್ರ ಮೋದಿ ಅವರೇ ಗೈರಾದರೂ ಎಂದರೆ ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂಬಂತಾಯಿತು. ಇವರಿಗೆ ಗೌರವ ಇದ್ದಿದ್ದರೆ ಸರ್ವ ಪಕ್ಷಗಳ ಸಭೆಗೆ ಹೋಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ಅಲ್ಲ ಜನಸೇವೆ ಮುಖ್ಯ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗುವುದು ಜನರ ಸೇವೆಗಾಗಿ ಇದರಲ್ಲಿ ಹೊಸದೇನು ಇಲ್ಲ, ಪ್ರಧಾನ ಮಂತ್ರಿ ಹುದ್ದೆ ಜನಸೇವೆಗಾಗಿ ಎಂಬುದು ಇವರಿಗೆ ಈಗ ಜ್ಞಾನೋದಯವಾದಂತಾಗಿದೆ, ರಾಜಕೀಯವೇ ಜನ ಸೇವೆ ಎಂಬು ಪ್ರಧಾನಿ ನರೇಂದ್ರ ಮೋದಿಗೆ ಈಗ ಅರಿವಾಗಿದೆ ಎಂದು ಲೇವಡಿ ಮಾಡಿದರು.