ಸಂಸದೆ ಸುಮಲತಾ ಸಹೋದರಿಗೆ ಬೆದರಿಕೆ ಆರೋಪ: ಪ್ರಕರಣ ದಾಖಲು
ಬೆಂಗಳೂರು, ಡಿ.2: ಹಣಕಾಸಿನ ವಿಚಾರವಾಗಿ ಬೆದರಿಕೆ ಹಾಕಿರುವ ಆರೋಪದಡಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಹೋದರಿ ನೀಡಿದ ದೂರಿನ ಮೇರೆಗೆ ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಲತಾ ಅವರ ಸಹೋದರಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ವಿಶಾಲಾಕ್ಷಿ ಭಟ್ ಸೇರಿ ಮೂವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನ.30ರಂದು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೇಣುಕಾ ಮನೆಗೆ ವಿಶಾಲಾಕ್ಷಿ ಹಾಗೂ ಇಬ್ಬರು ಪುರುಷರು ಮನೆಗೆ ಹೋಗಿದ್ದಾರೆ. ಕೋರ್ಟಿನ ಅಮೀನರು (ಸಿಬ್ಬಂದಿ) ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದಾರೆ.
ಈ ವೇಳೆ, ರೇಣುಕಾ ಅವರ ಬಳಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಳ್ಳಲು ಯತ್ನಿಸಿದ್ದಾರೆ. ಅನುಮಾನಗೊಂಡು ರೇಣುಕಾ ಗುರುತಿನ ಚೀಟಿ ತೋರಿಸುವಂತೆ ಹೇಳುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಕೋಣನಕುಂಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶಾಲಾಕ್ಷಿ ಭಟ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.