ನಾನೇ ಸಿಎಂ ಎಂದು ಹೇಳಿಕೊಂಡು ತಿರುಗಾಡುವವರ ಬಾಯಿಗೆ ಬೀಗ ಹಾಕಬೇಕು: ಬಿಜೆಪಿ ಶಾಸಕ ಯತ್ನಾಳ್
ಬೆಳಗಾವಿ, ಡಿ. 17: ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿಕೊಂಡು ತಿರುಗಾಡುವವರ ಬಾಯಿಗೆ ಬೀಗ ಹಾಕಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಸಭೆ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2022ರ ಜನವರಿ 15ರ ಬಳಿಕ ನಾನೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದೇನೆ ಎನ್ನುವವರ ಬಾಯಿ ಮುಚ್ಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಯಾವುದೇ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಇದೆ. ಆ ಪ್ರಕ್ರಿಯೆ ಮುಗಿಸಿ ಮಾರ್ಚ್ ಬಜೆಟ್ನೊಳಗೆ ಎಲ್ಲ ಸಮುದಾಯಗಳಿಗೆ ಸಂಪುಟದಲ್ಲಿ ನಿರ್ಣಯ ಮಾಡುತ್ತೇನೆ ಎಂದಿದ್ದಾರೆ. ಇಂದು ಇತಿಹಾಸ ಯಾವುದು ಚರ್ಚೆ ಮಾಡಿಲ್ಲ. ಅಂತಿಮ ಹಂತದ್ದು ಮಾತ್ರ ಚರ್ಚೆ ಮಾಡಿದ್ದೇವೆ ಎಂದರು.
ಸಮುದಾಯದ ಸಭೆಗೆ ಗೈರು ಹಾಜರಾದವರು ಮುಂದಿನ ಸಲ ಮನೆಯಲ್ಲಿ ಮಲಗುತ್ತಾರೆ. ಹೀಗಾಗಿ, ಗೈರಾಗಿದ್ದಾರೆ ಎಂದು ಟೀಕಿಸಿದ ಅವರು, ನಮ್ಮ ಹೋರಾಟದಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗುತ್ತದೆ. ಏನೂ ಗಡುವು ಇಲ್ಲ ಎಂದು ಹೇಳಿದರು.