ಮೈಸೂರು: ಅರಮನೆ ಆವರಣದಲ್ಲಿ ಬಣ್ಣ ಬಣ್ಣಗಳಿಂದ ಚಿತ್ತಾರಗೊಂಡು ಕಣ್ಮನ ಸೆಳೆದ ಹೂವುಗಳು
ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ
ಮೈಸೂರು: ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷದ ಹಿನ್ನಲೆಯಲ್ಲಿ ಇಂದಿನಿಂದ ಜ.2 ರ ವರೆಗೆ ಮೈಸೂರಿನ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಶನಿವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.
ಇದೇ ವೇಳೆ ಶಾಸಕ ಎಲ್.ನಾಗೇಂದ್ರ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳಾದ ಎಸ್.ಮಹದೇವಯ್ಯ, ಎನ್.ಆರ್.ಕೃಷ್ಣಪ್ಪ ಗೌಡ, ಅಪ್ಪಣ್ಣ, ಹೇಮಂತ್ ಕುಮಾರ್ ಗೌಡ, ವಿ.ಫಣೀಶ್, ಎಲ್.ಆರ್.ಮಹದೇವಸ್ವಾಮಿ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪುಷ್ಪಗಳಿಂದ ಗೌರವ ಸಲ್ಲಿಸಲಾಯಿತು.
ಉದ್ಘಾಟನೆಯ ಮೊದಲ ದಿನವೇ ಸಾವಿರಾರು ಮಂದಿ ಆಗಮಿಸಿ ಬಣ್ಣ ಬಣ್ಣದ ಹೂಗಳ ಚಿತ್ತಾರವನ್ನು ಕಣ್ತುಂಬಿಕೊಂಡರು.
ಸುಮಾರು ಹತ್ತು ಲಕ್ಷ ಹೂಗಳಿಂದ ನಿರ್ಮಾಣ ಮಾಡಿರುವ ರಾಮ ಮಂದಿರ, ಆಕರ್ಷಣೆಗೊಂಡಿತ್ತು. ಇದರ ಜೊತೆಗೆ ಚಾಮುಂಡಿ ದೇವಸ್ಥಾನ, ಆನೆ ಖೆಡ್ಡಾ, ಪಲ್ಲಕ್ಕಿಯಲ್ಲಿ ಮಹಾರಾಣಿ, ಈ ವರ್ಷದ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ, ಅಭಿನಂದನ್, ಮಹಾತ್ಮ ಗಾಂಧಿ, ಜಯಚಾಮರಾಜೇಂದ್ರ ಒಡೆಯರ್, ಸೆಲ್ಫಿ ಪಾಯಿಂಟ್ ಸೇರಿದಂತೆ 20 ಕ್ಕೂ ಹೆಚ್ಚು ಪ್ರತಿಮೆಗಳನ್ನು ಪುಷ್ಪಗಳಿಂದ ನಿರ್ಮಾಣ ಮಾಡಲಾಗಿದೆ.
ಹಿನ್ನಲೆ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅರಮನೆ ಆವರಣದ ರಾತ್ರಿಯ ಬೆಳಕಿನಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಗೀತನಮನ ಸಲ್ಲಿಸಿದರು.