ಆಸ್ತಿ ಮಾರಾಟ-ಖರೀದಿಗೆ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿ: ಸಚಿವ ಆರ್.ಅಶೋಕ್
ಬೆಂಗಳೂರು, ಜ.1: ಸ್ಥಿರಾಸ್ತಿಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಪ್ರಕಟಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಥಿರಾಸ್ತಿಗಳಾದ ಕೃಷಿ ಭೂಮಿ, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್ಮೆಂಟ್ಗಳು, ಫ್ಲ್ಯಾಟ್ಗಳು, ಭೂ ಪರಿವರ್ತಿತ ಜಮೀನುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ 2022ರ ಜ. 1ರಿಂದ ಮಾರ್ಚ್ 31ರವರೆಗೆ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಿದೆ ಎಂದು ತಿಳಿಸಿದರು.
ಕೊರೋನ ಸಾಂಕ್ರಾಮಿಕ ಕಾರಣದಿಂದ ಎರಡು ವರ್ಷಗಳಿಂದ ಜನರು ಸಂಕಷ್ಟದಲ್ಲಿದ್ದು, ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಈ ತೀರ್ಮಾನ ಮಾಡಿದೆ. ಆಯಾ ಪ್ರದೇಶದ ಮಾರ್ಗಸೂಚಿ ದರವನ್ನು ಆಧರಿಸಿ ಈ ರಿಯಾಯಿತಿ ಅನ್ವಯವಾಗಲಿದೆ. ಎಲ್ಲ ರೀತಿಯ ಆಸ್ತಿಗಳ ನೋಂದಣಿಗೆ ಈ ರಿಯಾಯಿತಿ ಅನ್ವಯಿಸಲಿದೆ ಎಂದು ಸಚಿವ ಅಶೋಕ್ ಸ್ಪಷ್ಟಣೆ ನೀಡಿದರು.
ಆಸ್ತಿ ಮಾರಾಟ ಮತ್ತು ಖರೀದಿಸುವ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಈ ತೀರ್ಮಾನ ಮಾಡಿದ್ದು ಕೇವಲ ಮೂರು ತಿಂಗಳು ಮಾತ್ರ ಈ ಅವಕಾಶ ನೀಡಲಾಗಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಸಮಾಲೋಚನೆ ನಡೆಸಿ ನಿರ್ಧಾರ ಮಾಡಲಾಗಿದೆ. ಇದರಿಂದ ಜನರಿಗೆ ಅನುಕೂಲ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.
ಆದೇಶ: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2019-20ನೆ ಸಾಲಿನಿಂದ ರಾಜಸ್ವ ಸಂಗ್ರಹದಲ್ಲಿ ಒಟ್ಟು 2,101 ಕೋಟಿ ರೂ.ಗಳಷ್ಟು ಕೊರತೆ ಉಂಟಾಗಿದ್ದು, ಹೀಗಾಗಿ ರಾಜಸ್ವ ಹೆಚ್ಚಳಕ್ಕಾಗಿ ಹೊಸದಿಲ್ಲಿಯಲ್ಲಿ ನಿರ್ದಿಷ್ಟ ಅವಧಿಗೆ ಶೇ.20ರಷ್ಟು ಮಾರ್ಗಸೂಚಿ ದರವನ್ನು ಕಡಿಮೆ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ಶೇ.10ರಷ್ಟು ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಕಡಿತಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ಜ.1ರಿಂದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿದ್ದು, ದಸ್ತಾವೇಜುಗಳ ನೋಂದಣಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರದ ಶೇ.10ರಷ್ಟು ಕಡಿಮೆ ಮಾಡಲಾಗಿದ್ದು, 2022ರ ಜನವರಿ 1ರಿಂದ ಮಾರ್ಚ್ 31ರ ವರೆಗೆ ಮಾರ್ಗಸೂಚಿ ದರಗಳೆಂದು ಪರಿಗಣಿಸಬಹುದಾಗಿದೆ ಎಂದು ನೋಂದಣಿ ಇಲಾಖೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಪಾದಯಾತ್ರೆ ಗಿಮಿಕ್: ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಕೈಗೊಳ್ಳಲು ಉದ್ದೇಶಿಸಿರುವ ಪಾದಯಾತ್ರೆ ರಾಜಕೀಯ ಗಿಮಿಕ್ ಅಷ್ಟೇ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಆರು ವರ್ಷದ ಅವಧಿಯಲ್ಲಿ ಏನೂ ಮಾಡದೇ ಇದೀಗ ಜನರ ಅನುಕಂಪ ಗಿಟ್ಟಿಸಲು ಪಾದಯಾತ್ರೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.