ಚಿಕ್ಕಮಗಳೂರು: ಅತ್ತೆಯ ಹತ್ಯೆಗೈದು ಅಳಿಯ ಪರಾರಿ; ಪ್ರಕರಣ ದಾಖಲು
ಚಿಕ್ಕಮಗಳೂರು, ಜ.3: ವ್ಯಕ್ತಿಯೋರ್ವ ಪತ್ನಿಯ ತಾಯಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.
ಕಾಳಮ್ಮ(75) ಹತ್ಯೆಯಾದ ವೃದ್ಧೆಯಾಗಿದ್ದು, ವೃದ್ಧೆಯ ಮಗಳ ಗಂಡ ರಮೇಶ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ರವಿವಾರ ಸಂಜೆ ರಮೇಶ ಕುಡಿದ ಮತ್ತಿನಲ್ಲಿ ಕಿಚ್ಚಬ್ಬಿ ಗ್ರಾಮದಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದ ರಮೇಶ್ ಪತ್ನಿ ಮಂಜುಳಾರಿಗೆ ಬೆತ್ತದ ಕಡ್ಡಿಗಳಿಂದ ಮಾಡಿದ್ದ ಪೊರಕೆಯಿಂದ ಮನಬಂದಂತೆ ಥಳಿಸುತ್ತಿದ್ದ. ಈ ವೇಳೆ ಮಂಜುಳಾ ಅವರ ತಾಯಿ ಕಾಳಮ್ಮ ಜಗಳ ಬಿಡಿಸಲು ಮಧ್ಯೆ ಬಂದಿದ್ದು, ಈ ವೇಳೆ ರಮೇಶ್ ಕುಡಿದ ಮತ್ತಿನಲ್ಲಿ ವೃದ್ಧೆ ಕಾಳಮ್ಮರಿಗೂ ಥಳಿಸಿದ್ದ ಎಂದು ಹೇಳಲಾಗಿದೆ.
ತೀವ್ರ ಹಲ್ಲೆಗೊಳಗಾಗಿದ್ದ ಕಾಳಮ್ಮ ಅಸ್ವಸ್ಥಗೊಂಡಿದ್ದನ್ನು ಕಂಡ ಮಗಳು ಮಂಜುಳಾ ತಾಯಿಯನ್ನು ಉಪಚರಿಸಿದ್ದರು. ಆದರೆ ಬೆಳಗಿನ ವೇಳೆ ಕಾಳಮ್ಮ ಎಷ್ಟು ಹೊತ್ತಾದರೂ ಏಳದಿರುವುದನ್ನು ಕಂಡ ಮಂಜುಳಾ ಎಬ್ಬಿಸಲು ಮುಂದಾದಾಗ ಕಾಳಮ್ಮ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಮಂಜುಳಾ ತನ್ನ ಪತಿಯ ವಿರುದ್ಧ ನರಸಿಂಹರಾಜಪುರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ರಮೇಶ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.